ಲೇಖಕರು: ಪುರುಷೋತ್ತಮ ಬಿಳಿಮಲೆ

ನೀರಿಗಿಂತ ರಕ್ತ ಅಗ್ಗವಾಗಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಈ ಹೊತ್ತಿನ ಭಾರತ ದೇಶದಲ್ಲಿ 60 ಕೋಟಿ ಜನರಿಗೆ ಕುಡಿಯಲು ನೀರಿಲ್ಲ. ಸುಮಾರು ಎರಡು ಲಕ್ಷ ಜನರು ನೀರಿನ ಕಾರಣವಾಗಿ ಸಾವನ್ನಪ್ಪಿದ್ದಾರೆ. ಶೇಕಡಾ 70 ರಷ್ಟು ನೀರು ಮಲಿನಗೊಂಡಿದೆ. ಮಕ್ಕಳಿಗೆ, ಗಂಡನಿಗೆ, ಅತಿಥಿಗಳಿಗೆ ನೀರು ಒದಗಿಸುವ ಮಹಿಳೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಳೆ.  ಬಹುತೇಕ ಜಾಗಗಳಲ್ಲಿ ನೆಲದಡಿಯ ನೀರು ಬತ್ತಿ ಹೋಗಿದೆ. ಒಳ್ಳೆಯ ನೀರು ಒದಗಿಸುವ  ವಿಷಯದಲ್ಲಿ ಭಾರತವು ಜಾಗತಿಕ ಸೂಚಿಯಲ್ಲಿ 122ರಲ್ಲಿ 120ನೇ ಸ್ಥಾನದಲ್ಲಿದೆ.
ಬೇರೆ ದೇಶಗಳಲ್ಲಿ ಇದೊಂದು ತುರ್ತು ಸ್ಥಿತಿ, ನಮ್ಮಲ್ಲಿ …?

ಇಡೀ ಉತ್ತರ ಭಾರತ ಹೊತ್ತಿ ಉರಿಯುತ್ತದೆ. ವಾತಾವರಣದ ಉಷ್ಣಾಂಶ 48-49 ಡಿಗ್ರಿ ಇದ್ದು ನೆಲದ ಉಷ್ಣಾಂಶ 53 ಡಿಗ್ರಿ ದಾಟಿದೆ. ಬಿಹಾರದ 150ಕ್ಕೂ ಹೆಚ್ಚು ಮಕ್ಕಳ ಸಾವಿನಲ್ಲಿ ಹಸಿವು ಮತ್ತು ಬಿಸಿಲು ಸೇರಿಕೊಂಡಿದೆ. ನೀರಿಲ್ಲ. ಇದ್ದ ನೀರು ಕಲುಷಿತವಾಗಿದೆ. ನೀರಿನ ಉಪಯೋಗದ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಈ ಭಯಾನಕ ಸ್ಥಿತಿಯ ಮೊದಲು ಬಲಿ ಪಶು ಮಹಿಳೆ ಎಂಬುದನ್ನು ಕಣ್ಣಾರೆ ಕಾಣುತ್ತಿದ್ದೇನೆ.

ನಮ್ಮ ಪ್ರಾಚೀನರು ಮಹಿಳೆ ಮತ್ತು ಪ್ರಕೃತಿಯನ್ನು ಸಮೀಕರಿಸಿದ್ದಾರೆ. ನದಿಗಳಿಗೆಲ್ಲ ಹೆಣ್ಣಿನ ಹೆಸರೇ! ಇದು ಕೇವಲ ಒಂದು ಭಾವನಾತ್ಮಕ ವಿಷಯವಲ್ಲ. ಇಂದು ನೀರು ಇಲ್ಲದಿದ್ದರೆ ಅದರ ತಕ್ಷಣದ ಪರಿಣಾಮವಾಗುವುದು ಮಹಿಳೆಯ ಮೇಲೆಯೇ. ಮಕ್ಕಳಿಗೆ ನೀರು ಕುಡಿಸುವ, ಮನೆ ಮಂದಿಗೆಲ್ಲಾ ಅಡುಗೆ ಮಾಡಿ ಬಡಿಸುವ, ನೆಂಟರು ಬಂದರೆ ಅವರಿಗೆ ಸ್ನಾನ ಮಾಡಲು ನೀರು ಹೊಂದಿಸುವ ಕೆಲಸ ಅವಳದು. ದೂರದಿಂದ ಎಲ್ಲಿಂದಲೋ ನೀರು ತರುವ ಕೆಲಸವೂ ಅವಳದು. ನೀರು ಹುಡುಕುತ್ತಾ ದೂರ ದೂರ ಸಾಗುವವಳು ಅವಳು.

ಕೊಳವೆ ಬಾವಿಯ ಹತ್ತಿರ ಬಾರದಿರುವ ನೀರಿಗೆ ಕಾಯುತ್ತಾ ಕುಳಿತುಕೊಳ್ಳುವವಳೂ ಅವಳು. ನೀರಿನ ಕುರಿತು ಪ್ರಕಟವಾಗುತ್ತಿರುವ ಎಲ್ಲ ಚಿತ್ರಗಳಲ್ಲಿಯೂ ಮಹಿಳೆಯೇ ಕಾಣಿಸಿಕೊಳ್ಳುತ್ತಿದ್ದಾಳೆ. ಈಗ ಪ್ರಕೃತಿಯ ವಿನಾಶದ ಜೊತೆಗೆ ಮಹಿಳೆಯೂ ನಾಶವಾಗುತ್ತಿದ್ದಾಳೆ. ಭೂಮಿಯನ್ನು ಸಂಪನ್ಮೂಲ ಎಂದು ಭಾವಿಸಿ ಲೂಟಿ ಮಾಡುವವರು, ಪರಿಸರ ಮತ್ತು ಮಹಿಳೆಯನ್ನು ಒಟ್ಟಾಗಿಯೇ ವಿನಾಶದತ್ತ ತಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here