ತೆಂಗು ವಲಯ ಉತ್ತೇಜನಕ್ಕೆ ಕ್ರಮ ತೆಗೆದುಕೊಳ್ಳಿ

0

ಭಾರತದಲ್ಲಿ ತೆಂಗು ಕೃಷಿ-ಉದ್ಯಮವು ತೆಂಗು ಉತ್ಪನ್ನಗಳ ಬೆಲೆ ಏರಿಳಿತ ಸೇರಿದಂತೆ ಹಲವಾರು ರೀತಿಯ ಅಡೆತಡೆಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯು ತೆಂಗು ಬೆಳೆಗಾರರು ಹಾಗೂ ಉದ್ಯಮ ಎರಡನ್ನು ತೀವ್ರ ಬಿಕ್ಕಟ್ಟಿಗೆ ತಂದು ನಿಲ್ಲಿಸಿದೆ. ಈ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯ ದುಂಡು ಮೇಜಿನ ಸಭೆಯು ವಿವಿಧ ಮಧ್ಯಸ್ಥಗಾರರ ಗುಂಪು ಒಟ್ಟುಗೂಡಲು ಒಂದು ಪ್ರಮುಖ ವೇದಿಕೆಯಾಗಿ ಕೆಲಸ ಮಾಡಿದೆ.

ನವೆಂಬರ್ 04, 2023 ರಂದು ತಿಪಟೂರಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ “ತೆಂಗು ಕೃಷಿ-ಉದ್ಯಮದ ಅವಲೋಕನ” – ರಾಷ್ಟ್ರೀಯ ಮಟ್ಟದ ದುಂಡು ಮೇಜಿನ ಸಭೆ ಆಯೋಜಿತವಾಗಿತ್ತು. ಪ್ರಸ್ತುತ ಭಾರತದ ತೆಂಗು ಕೃಷಿ-ಉದ್ಯಮವು ಎದುರಿಸುತ್ತಿರುವ ಮಾರುಕಟ್ಟೆ ಒತ್ತಡ ಹಾಗು ಹವಮಾನ ವೈಪರೀತ್ಯದಂತಹ ವಿವಿಧ ಸವಾಲುಗಳಿಗೆ ಪರಿಹಾರ ಹುಡುಕುವ ಗುರಿಯನ್ನು ಸದರಿ ಸಭೆ ಹೊಂದಿತ್ತು.

ತೆಂಗು ಕೃಷಿ – ಉದ್ಯಮದ ಪುನಶ್ಚೇತನಕ್ಕೆ ಸೇರಿದ್ದ ದುಂಡುಮೇಜಿನ ಸಭೆ

ತೆಂಗು ಬೆಳೆಗಾರರು, ವಾಣಿಜ್ಯೋದ್ಯಮಿಗಳು, ವ್ಯಾಪಾರಿಗಳು, ವಿಜ್ಞಾನಿಗಳು ಮತ್ತು ಉದ್ಯಮ ತಜ್ಞರು ಸೇರಿ ಎಲ್ಲರೂ ಒಟ್ಟಾಗಿ ಪ್ರಸ್ತುತ ಸಮಸ್ಯೆಗಳನ್ನು ಚರ್ಚಿಸಿ, ತೆಂಗು ಕೃಷಿ-ಉದ್ಯಮಕ್ಕೆ ಸುಸ್ಥಿರ ಪರಿಹಾರಗಳನ್ನು ಅನ್ವೇಷಿಸುವ ಕೆಲಸ ಮಾಡಿದರು.

ಸಭೆಯ ಪ್ರಾಥಮಿಕ ಉದ್ದೇಶ, ಚರ್ಚೆಗಳ ಮೂಲಕ ರಚಿಸಲಾಗುವ ಸಮಗ್ರ ಶಿಫಾರಸುಗಳನ್ನು ಒಂದು ಸಂಪೂರ್ಣ ವರದಿಯಾಗಿ ತಯಾರಿಸಿ ಆ ವರದಿಯನ್ನು ಸಂಬಂಧಿತ ಸರ್ಕಾರಿ ಇಲಾಖೆಗಳು ಮತ್ತು ಕೃಷಿ ನೀತಿ ನಿರೂಪಕರೊಂದಿಗೆ ಹಂಚಿಕೊಳ್ಳಲಾಗುವುದು. ತೆಂಗು ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಮತ್ತು ಭಾರತದಲ್ಲಿ ತೆಂಗು ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ರೈತರ ಜೀವನೋಪಾಯವನ್ನು ಸುರಕ್ಷಿತಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಎಂದು ಭಾರತೀಯ ತೆಂಗು ಸಮುದಾಯದ ಗೌರವಾಧ್ಯಕ್ಷ ಕೆ. ಟಿ. ಗಂಗಾಧರ್ ಪ್ರಸ್ತಾವನೆಯಲ್ಲಿ ತಿಳಿಸಿದರು.

“ತೆಂಗು ಕೃಷಿ ಉದ್ಯಮ ಎದುರಿಸುತ್ತಿರುವ ಸವಾಲುಗಳು ನಮ್ಮ ರಾಷ್ಟ್ರದ ಆಹಾರ ಭದ್ರತೆ ಮತ್ತು ಲಕ್ಕ್ಷಾಂತರ ರೈತಕುಟುಂಬಗಳ ಜೀವನೋಪಾಯದ ಯೋಗಕ್ಷೇಮಕ್ಕೆ ಅತ್ಯಂತ ಮಹತ್ವದ್ದಾಗಿದೆ, ನಮ್ಮ ರೈತರು ಮತ್ತು ಉದ್ಯಮ ವೃತ್ತಿಪರರು ಗಮನಾರ್ಹ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸದರಿ ಸಭೆಯು ಈ ಒಂದು ಪ್ರಮುಖ ವಲಯವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯನ್ನು ಇಡುತ್ತಿದೆ. ತೆಂಗು ವಲಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಮ್ಮ ಕೃಷಿ ಸಮುದಾಯಗಳನ್ನು ಬೆಂಬಲಿಸುವುದರ ಜೊತೆಗೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮಂಡಳಿಯ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ತಿಪಟೂರು ಉಂಡೆ ಕೊಬ್ಬರಿ ಒಂದು ಕಾಲದಲ್ಲಿ ದೇಶದ ಬಯಲುಸೀಮೆಯ ಪ್ರದೇಶದಾದ್ಯಂತ ಆರ್ಥಿಕತೆಗೆ ಕೊಡುಗೆ ನೀಡುವ ಬಹುಮುಖ್ಯ ಹಾಗು ಅತ್ಯಂತ ಮೌಲ್ಯಯುತ ಕೃಷಿ ಉತ್ಪನ್ನವೆಂದು ಪರಿಗಣಿಸಲ್ಪಟ್ಟಿತು. ಅದರೆ ಈಗ ಸಬ್ಸಿಡಿ ಹೊಂದಿರುವ ಕಚ್ಚಾ ತಾಳೆ ಎಣ್ಣೆ ಮತ್ತು ಇತರೆ ಖಾದ್ಯತೈಲಗಳ ಅಗ್ಗದ ಆಮದುಗಳಿಂದ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಯಲ್ಲಿ ಅನಾನುಕೂಲತೆ ಉಂಟಾಗಿ ಕೊಬ್ಬರಿಯ ಮೌಲ್ಯವನ್ನು ಕಡಿಮೆ ಮಾಡಿದೆ. ಇದು ರೈತರ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಭಾರತೀಯ ತೆಂಗು ಸಮುದಾಯ ಟ್ರಸ್ಟ್‌ನ ಅಧ್ಯಕ್ಷ ಯೋಗೀಶ್ವರಸ್ವಾಮಿ ಹೇಳಿದರು.

ಮುಕ್ತ ವ್ಯಾಪಾರದ ಪ್ರಭಾವದ ಕುರಿತು SAFTA (ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ) ಮತ್ತು ಇಂಡೋ-ಶ್ರೀಲಂಕಾದ FTA (ಮುಕ್ತ ವ್ಯಾಪಾರ ಒಪ್ಪಂದ) ಗಳಂತಹ RTA (ಪ್ರಾದೇಶಿಕ ವ್ಯಾಪಾರ ಒಪ್ಪಂದ) ಗಳು, ಶ್ರೀಲಂಕಾ ಮತ್ತು ಇತರ ದೇಶಗಳಿಂದ ತೆಂಗಿನಕಾಯಿ ಪುಡಿ ಮತ್ತು ಇತರ ತೆಂಗಿನಕಾಯಿಯ ಉತ್ಪನ್ನಗಳನ್ನು ಕಡಿಮೆ ಸಂಕ ಹಾಗೂ ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಮಾರುಕಟ್ಟೆಯಲ್ಲಿ ಬೆಲೆ ಅಗ್ಗವಾಗಿ ಪ್ರವಾಹಕ್ಕೆ ಕಾರಣವಾಗಿದೆ. ನೆರೆಯ ದೇಶಗಳ ತೆಂಗಿನ ಉತ್ಪನ್ನಗಳು, ದೇಶೀಯವಾಗಿ ಉತ್ಪಾನೆಯಾಗುವ ತೆಂಗಿನ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹಾನಿಗೊಳಿಸುತ್ತವೆ. ವ್ಯಾಪಾರ ಮಾತುಕತೆಗಳು ಮತ್ತು ಒಪ್ಪಂದಗಳಲ್ಲಿ ಭಾರತದ ತೆಂಗು ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂದು ತಮಿಳುನಾಡಿನ ರೈತ ರಕ್ಷಣಾ ಸಂಘದ ಅಧ್ಯಕ್ಷ ಈಸನ್ ಪ್ರತಿಪಾದಿಸಿದರು.

ತೆಂಗಿನಲ್ಲಿ ಸಾಂಪ್ರದಾಯಿಕವಲ್ಲದ ರಾಸಾಯನಿಕ ಕೃಷಿಯು ದೇಶದ ಕೃಷಿ ಭೂಮಿಯ ಮಣ್ಣಿನ ಅವನತಿಗೆ ಹಾಗೂ ಕಡಿಮೆ ಉತ್ಪಾದಕತೆಗೆ ಕಾರಣವಾಗಿರುವುದರಿಂದ ತೆಂಗಿನಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ರೈತ ನಾಯಕಿ ನಂದಿನಿ ಜಯರಾಮ್ ಅಭಿಪ್ರಾಯಪಟ್ಟರು.
ಕೈಗಾರಿಕಾ ಕೃಷಿಗೆ ಬೃಹತ್ ಸಬ್ಸಿಡಿಗಳನ್ನು ನೀಡುವ ಪಾಶ್ಚಿಮಾತ್ಯ ದೇಶಗಳ ಅನ್ಯಾಯದ ಡಬ್ಲ್ಯುಟಿಒ ಮತ್ತು ಮುಕ್ತ ವ್ಯಾಪಾರದ ಆಡಳಿತವು ತೃತೀಯ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಗ್ಗದ ರಫ್ತಿಗೆ ಕಾರಣವಾಗಿದ್ದು ಇದರಿಂದಾಗಿ ಸಣ್ಣ ರೈತರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಭಾರತ ಸರ್ಕಾರವು ನಮ್ಮ ರೈತರ ಜೀವನವನ್ನು ವ್ಯಾಪಾರ ಮಾಡಲು ಸಾಧ್ಯವಿಲ್ಲ. ಭಾರತೀಯ ರೈತರಿಗೆ ಕೃಷಿ ಕೇವಲ ಅವರ ವೃತ್ತಿಯಲ್ಲ, ಇದು ಅವರ ಸಂಸ್ಕೃತಿ, ಜೀವನ. ಮುಕ್ತ ವ್ಯಾಪಾರವು ಅನೇಕ ಮಾರುಕಟ್ಟೆ ವೈಫಲ್ಯಗಳನ್ನು ಉಂಟು ಮಾಡಿದೆ. ಭಾರತವು ನವ ಉದಾರವಾದಿ ವ್ಯಾಪಾರ ಸುಧಾರಣೆಗಳನ್ನು ಅಳವಡಿಸಿಕೊಂಡ ಸಮಯದಿಂದ ಅಪಾರ ಸಂಖ್ಯೆಯ ರೈತರ ಜೀವನವನ್ನು ಬಲಿ ತೆಗೆದುಕೊಂಡಿದೆ ಎಂದು ಕೇರಳದ ಪಿಟಿ ಜಾನ್ ಹೇಳಿದರು.

ಕೇಂದ್ರದ ತಾಳೆ ಎಣ್ಣೆಯ ಮೇಲಿನ ಆಮದು ಸುಂಕಗಳಲ್ಲಿನ ನಿರಂತರ ಬದಲಾವಣೆಗಳ ಪರಿಣಾಮದ ಕುರಿತು ಕೇರಳದ ಡೇವಿಸನ್ ಅವರು ಮಾತನಾಡುತ್ತಾ ತೆಂಗಿನ ಜೊತೆ ಇತರೆ ಖಾದ್ಯ ತೈಲಗಳೊಂದಿಗಿನ ತೀವ್ರ ಪೈಪೋಟಿಯು ತೆಂಗಿನ ಉತ್ಪನ್ನಗಳನ್ನು, ವಿಶೇಷವಾಗಿ ತೆಂಗಿನ ಎಣ್ಣೆಯನ್ನು ಕಡಿಮೆ ಸ್ಪರ್ಧಾತ್ಮಕವಾಗಿಸಿದೆ. ಇದು ನಮ್ಮ ಆದಾಯ ಮತ್ತು ಜೀವನೋಪಾಯದ ಮೇಲೆ ಭೀಕರ ಪರಿಣಾಮಗಳನ್ನು ಬೀರುತ್ತಿದೆ. ಈ ಅಮದು ಅಥವಾ ರಫ್ತು ಸುಂಕಗಳು ದೇಶೀಯ ತೆಂಗು ರೈತರಿಗೆ ಸಾಕಷ್ಟು ರಕ್ಷಣೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ತೆಂಗಿನ ಕೃಷಿ – ಉದ್ಯಮದ ವಲಯದಲ್ಲಿ ಗುಣಮಟ್ಟದ ಸುಧಾರಣೆ ಮತ್ತು ಮಾರುಕಟ್ಟೆ ಮೌಲ್ಯ ಏಕೀಕರಣದ ಅಗತ್ಯತೆ ಬಗ್ಗೆ ಕೈಗಾರಿಕೋದ್ಯಮಿ ಶಿವಪ್ರಸಾದ್ ಅವರು ಮಾತನಾಡಿದರು. ಜಾಗತಿಕ ಮಾರುಕಟ್ಟೆಯ ಮೇಲೆ ಕೇಂದ್ರೀಕರಿಸಬೇಕಾದರೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಪಡೆಯಲು ಎಲ್ಲಾ ಘಟಕಗಳಲ್ಲಿನ ನೈರ್ಮಲ್ಯದ ಗಮನವು ಉನ್ನತೀಕರಿಸುವ ಅಗತ್ಯವಿರುವ ಮಹೋನ್ನತ ಆದ್ಯತೆಯಾಗಿರಬೇಕು. ಉದಾಹರಣೆಗೆ: HACCP, ISO 20000, SQF ಮತ್ತು GMP – ಪ್ರಮಾಣಪತ್ರಗಳು ಎಂದು ವಿವರಿಸಿದರು.

ತೆಂಗಿನ ಕಾಯಿ ಪುಡಿ ಉತ್ಪನ್ನಕ್ಕೆ ದೇಶದಲ್ಲಿನ ವಿಘಟಿತ ಮಾರುಕಟ್ಟೆಗಳು, ಅತೀ ಸಣ್ಣ ಘಟಕಗಳು, ಹೆಚ್ಚುತ್ತಿರುವ ವಹಿವಾಟು ವೆಚ್ಚಗಳು ಮತ್ತು ಕಡಿಮೆ ದಕ್ಷತೆಯೊಂದಿಗೆ ದುರ್ಬಲವಾದ ಉತ್ಪನ್ನದ ಕೊನೆಯ ಮಾರುಕಟ್ಟೆ ಉಪಸ್ಥಿತಿಯು ವಿಸ್ತರಣೆ ಮತ್ತು ಬೆಂಬಲ ಸಾಧ್ಯತೆಗಳನ್ನು ಮಿತಿಗೊಳಿಸುತ್ತದೆ. ಈ ಮಿತಿಯನ್ನು ಹೋಗಲಾಡಿಸಲು ತೆಂಗು ಉದ್ಯಮದಲ್ಲಿ ಬ್ರ್ಯಾಂಡಿಂಗ್‌ನ ಅವಶ್ಯಕತೆಯಿದೆ ಮತ್ತು ಗುಣಮಟ್ಟದ ನಿಯಂತ್ರಣ ಮತ್ತು ಮಾರುಕಟ್ಟೆ ಏಕೀಕರಣದ ಮೇಲೆ ಸರ್ಕಾರದ ಕೇಂದ್ರೀಕೃತ ಮಧ್ಯಸ್ಥಿಕೆಯ ತುರ್ತು ಅಗತ್ಯತೆಯಾಗಿದೆ ಎಂದು ತಿಪಟೂರಿನ ವಾಣಿಜ್ಯೋದ್ಯಮಿ ಸಂತೋಷಕುಮಾರ್ ಪ್ರತಿಪಾದಿಸಿದರು.

ರೈತರು, ಕೈಗಾರಿಕಾ ಉದ್ಯಮಿಗಳು, ವಿಜ್ಞಾನಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖಾ ಅಧಿಕಾರಿಗಳು ಸೇರಿದಂತೆ ಭಾಗವಹಿಸಿದವರೆಲ್ಲರೂ ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ತಗ್ಗಿಸಲು ಸುಸ್ಥಿರ ಮತ್ತು ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಬೇಕು ಎಂಬ ವಿಚಾರಕ್ಕೆ ಸಮ್ಮತಿ ಸೂಚಿಸಿದರು.

ಸುಸ್ಥಿರವಾದ ಲಾಭವನ್ನು ಸಾಧಿಸಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಗಳಿಂದ ರೈತರನ್ನು ರಕ್ಷಿಸಲು ಸಣ್ಣ ಮತ್ತು ಅತಿ ಸಣ್ಣ ರೈತರ ಸುತ್ತಲೂ ಮೌಲ್ಯವರ್ಧನೆ ಮತ್ತು ಪೂರೈಕೆ ಸರಪಳಿಯಲ್ಲಿ ಪುನಚೇತರಿಕೆಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಸಭೆಯು ಪ್ರತಿಧ್ವನಿಸಿತು.

ಕರ್ನಾಟಕದ ತೆಂಗು ಬೆಳೆಯುವ 15 ಜಿಲ್ಲೆಗಳು ರೈತ ಪ್ರತಿನಿಧಿಗಳು, ಕೇರಳ, ತಮಿಳುನಾಡು, ಗೋವಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ರೈತರು ಭಾಗವಹಿಸಿದ್ದರು. ಐ.ಎಸ್.ಇ.ಸಿ ನ ಡಾ. ರಾಮಪ್ಪ, ಐ.ಎಸ್.ಎಫ್.ಸಿ ನ ಡಾ. ರಾಷ್ಟ್ರರಕ್ಷಕ್, ಕೆ.ಎಸ್.ಎಂ.ಬಿ. ನಿರ್ದೇಶಕರಾದ ಚಂದ್ರಕಾಂತ್ ಪಾಟೀಲ್, ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಮಧು, ಬೆಂಗಳೂರು ಸಿ.ಐ.ಐ.ಆರ್. ಸಿ. ಡಾ ಮುರಳೀಧರ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಡಾ ಚಂದ್ರಶೇಖರ್, ರಾಜ್ಯದ ತೆಂಗು ಉದ್ಯಮಿಗಳಾದ ಶಿವಪ್ರಸದ್, ಸಂತೋಷ್ ಕುಮಾರ್, ಹರ್ಷ, ಭಾರತೀಯ ತೆಂಗು ಸಮುದಾಯದ ಸದಸ್ಯರು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರುಗಳು ಹಾಗೂ ಇತರರು ಇದ್ದರು.

ಸಭೆ ತೆಗೆದುಕೊಂಡ ನಿರ್ಣಯಗಳು:
1. ತುರ್ತು ನೆರವು: ತೆಂಗಿನ ಕೃಷಿಕರ ಜೀವನೋಪಾಯವನ್ನು ಕಾಪಾಡಲು ಸರ್ಕಾರವು ಕೊಬ್ಬರಿಗೆ ವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (MSP) ತಕ್ಷಣವೇ ಹೆಚ್ಚಿಸಬೇಕು, ಅವರ ಉತ್ಪನ್ನಗಳಿಗೆ ನ್ಯಾಯೋಚಿತ ಲಾಭವನ್ನು ಖಚಿತಪಡಿಸಬೇಕು. ತೆಂಗು ಬೆಳೆಯುವ ರೈತರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ನಿವಾರಿಸಲು, ವಿಶೇಷವಾಗಿ ಸಂಕಷ್ಟ ಮತ್ತು ತುರ್ತು ಸಂದರ್ಭಗಳಲ್ಲಿ, ಬೇಷರತ್ತಾಗಿ ಉತ್ಪಾದಿಸಲಾದ ಎಲ್ಲಾ ಉಂಡೆ ಕೊಬ್ಬರಿಯನ್ನು ತಕ್ಷಣವೇ ನೆಫೆಡ್ ಮೂಲಕ ಖರೀದಿಸಬೇಕು.

2. ತೆಂಗಿನಎಣ್ಣೆ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು: ಈಗಾಗಲೇ ಅಸ್ಥಿರವಾಗಿರುವ ತೆಂಗಿನಎಣ್ಣೆ ಮಾರುಕಟ್ಟೆಯನ್ನು ಮತ್ತಷ್ಟು ಅಡ್ಡಿಪಡಿಸುವ ಯಾವುದೇ ಕ್ರಮಗಳಿಂದ ಸರ್ಕಾರವು ದೂರವಿರಬೇಕು. ಬದಲಿಗೆ, ಸಾರ್ವಜನಿಕ ವಿತರಣಾ ಕೇಂದ್ರಗಳ (PDS) ಮೂಲಕ ಅದರ ವಿತರಣೆಯನ್ನು ಖಾತ್ರಿಪಡಿಸುವ ಮೂಲಕ ನೇರವಾಗಿ ಗ್ರಾಹಕರ ಕೈಗೆ NAFED ಸಂಗ್ರಹಿಸಿದ ಉಂಡೆ ಕೊಬ್ಬರಿಯನ್ನು ಬಿಡುಗಡೆ ಮಾಡಬೇಕು. ಈ ಕಾರ್ಯತಂತ್ರದ ಕ್ರಮವು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಗಳ ಸ್ಥಿರತೆಗೆ ಕೊಡುಗೆ ನೀಡುತ್ತದೆ.

3. ತೆಂಗು ಉತ್ಪಾದನೆ ವೆಚ್ಚದ ಮೌಲ್ಯಮಾಪನದಲ್ಲಿ ಪಾರದರ್ಶಕತೆ: ತೆಂಗು ಬೆಳೆಗಾರರು ತಮ್ಮ ಬೆಳೆಗಳಿಗೆ ನ್ಯಾಯಯುತವಾದ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, MSP ನೀತಿಗಳು ಎಲ್ಲಾ ರಾಜ್ಯಗಳಲ್ಲಿ ಸಾಗುವಳಿಯಲ್ಲಿ ಉಂಟಾಗುವ ವಾಸ್ತವಿಕ ವೆಚ್ಚವನ್ನು ಪಾರದರ್ಶಕವಾಗಿ ಲೆಕ್ಕ ಹಾಕುವುದು ಕಡ್ಡಾಯವಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರೀಯ ಪ್ರಾಧಿಕಾರ (CACP) ನಡುವಿನ ತೆಂಗಿನಕಾಯಿ ಉತ್ಪಾದನಾ ವೆಚ್ಚದ ಅಂದಾಜುಗಳಲ್ಲಿನ ಅಸಮಾನತೆಯನ್ನು ತಕ್ಷಣವೇ ಸರಿಪಡುಸಬೇಕು ಇದು ಬೆಲೆಯಲ್ಲಿನ ನ್ಯಾಯಸಮ್ಮತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕ ಅಂಶವಾಗಿದೆ.

4. ವ್ಯಾಪಾರ ನೀತಿಯ ಪರಿಶೀಲನೆ: ಖಾದ್ಯ ತೈಲಗಳ ವ್ಯಾಪಾರ ನೀತಿಯಲ್ಲಿ ಪುನರ್ ಪರಿಶೀಲನೆ ಹಾಗೂ ತ್ವರಿತ ಪರಿಷ್ಕರಣೆ ಅಗತ್ಯವಿದೆ. ಈ ಮೂಲಕ ದೇಶೀಯ ಉತ್ಪನ್ನಗಳನ್ನು ರಕ್ಷಿಸುವ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಡುವೆ ಸಮತೋಲನವನ್ನು ಸಾಧಿಸಬೇಕು.

5. ನ್ಯಾಯಯುತ ವ್ಯಾಪಾರ ಪದ್ರತಿ ಜಾರಿ : ತೆಂಗಿನ ಕೃಷಿಕರ ಉತ್ಪನ್ನಗಳು ಗ್ರಾಹಕರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಖಾತ್ರಿಪಡಿಸಲು ನ್ಯಾಯೋಚಿತ-ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುವುದು ಅತ್ಯಗತ್ಯ. ಡಂಪಿಂಗ್ (ಸುರಿ) ವಿರೋಧಿ ಕಾಯಿದೆಯ ತಕ್ಷಣದ ಅನುಷ್ಠಾನವು ತೆಂಗು ಬೆಳೆಗಾರರ ಮೇಲೆ ಧನಾತ್ಮಕ ಪರಿಣಾಮ ಬೀರಿ ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

6. ನಿರ್ವಹಣಾ ಘಟಕ : ರೈತ ಸಂಘಟನೆ ಹಾಗೂ ತೆಂಗು ಬೆಳೆಗಾರರ ನೇತೃತ್ವದಲ್ಲಿ ಮುಕ್ತ ವ್ಯಾಪಾರ ನಿರ್ವಹಣಾ ಘಟಕ ಆರಂಭಿಸಬೇಕು.

7. ಸಬ್ಸಿಡಿ ಅಕ್ರಮ: ರಾಜ್ಯ ತೆಂಗು ಸಂಸ್ಕರಣಾ ಘಟಕದ ಉದ್ಯಮಿಗಳಿಂದ ತೆಂಗು ಬೆಳೆಗಾರರ ಅನುಕೂಲಕ್ಕಾಗಿ ಮೀಸಲಿಟ್ಟ ಸಬ್ಸಿಡಿಗಳನ್ನು ದುರುಪಯೋಗಪಡಿಸಿಕೊಳ್ಳುವುದು ತುರ್ತು ವಿಷಯವಾಗಿದೆ. • ವಿದೇಶಿ ತೆಂಗಿನ ಉತ್ಪನ್ನಗಳ ಆಮದು ನೀತಿಗಳ ದುರುಪಯೋಗ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದನ್ನು ತನಿಖೆ ಮಾಡಬೇಕು ಮತ್ತು ನ್ಯಾಯಾಂಗ ತನಿಖೆಯ ಮೂಲಕ ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡಬೇಕು.

8. ಸಬ್ಸಿಡಿ : ತೆಂಗು ಬೆಳೆಗಾರರಿಗೆ ಮೀಸಲಿಟ್ಟ ಸಬ್ಸಿಡಿ ದುರ್ಬಳಕೆ ತಡೆಗಟ್ಟಬೇಕು.

9. ಭೌಗೋಳಿಕ ಸೂಚ್ಯಂಕ : ತಿಪಟೂರಿನ ಉಂಡೆ ಕೊಬ್ಬರಿಗೆ ಭೌಗೋಳಿಕ ಸೂಚ್ಯಂಕ ಸ್ಥಾಪಿಸಲು ಹಾಗೂ ಬ್ರಾಂಡ್ ಐಡೆಂಟಿಟಿ ಸುಧಾರಣೆ ಮಾಡಲು ವಿಶೇಷ ಅಧ್ಯಯನದ ತುರ್ತು ಅಗತ್ಯವಿದ್ದು, ಇದನ್ನು ಖಚಿತಪಡಿಸಿಕೊಳ್ಳಲು CFTRI-ಮೈಸೂರು ಮತ್ತು ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನಂತಹ ಸಂಸ್ಥೆಗಳ ಸಹಯೋಗದೊಂದಿಗೆ ತಕ್ಷಣ ಕೆಲಸ ಆರಂಭಿಸಬೇಕು.

10. ITPGRFA, PPVFRA, ಮತ್ತು ರೈತರ ಹಕ್ಕುಗಳ ಉಲ್ಲಂಘನೆ: ತಲೆಮಾರುಗಳಿಂದ ಸ್ಥಳೀಯ ಪರಿಸ್ಥಿತಿಗಳಿಗೆ ಸೂಕ್ತವಾಗಿರುವಂತ ತೆಂಗಿನ ತಳಿಯನ್ನು ಅಭಿವೃದ್ದಿಪಡಿಸಿ ಪೋಷಿಸಿ, ಸಂರಕ್ಷಿಸಿಕೊಂಡು ಬಂದಿರುವ ತಿಪಟೂರು ಟಾಲ್ ತೆಂಗಿನ ತಳಿಯು ಸದರಿ ಮುಕ್ತ ವ್ಯಾಪಾರ ನೀತಿಗಳ ಪ್ರಭಾವದಿಂದ ತಳಿ ಅಳಿವಿನಂಚಿಗೆ ತಲುಪುವ ಭೀತಿಯಿದೆ. ಇಂತಹ ವ್ಯಾಪಾರ ನೀತಿಯ ವೈಫಲ್ಯಗಳಿಂದ ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಅಂತರರಾಷ್ಟ್ರೀಯ ಒಪ್ಪಂದ (ITPGRFA) ಹಾಗು ಸಸ್ಯ ವೈವಿಧ್ಯ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ 2001 ರ ಆರ್ಟಿಕಲ್ 9 ಸೇರಿದಂತೆ ಅಂತರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಸರ್ಕಾರವು ಕೂಡಲೇ ಈ ತಳಿಯನ್ನು ಮತ್ತು ಅವಲಮಬಿತ ಬೆಳೆಗಾರರ ಹಕ್ಕುಗಳನ್ನು ಸಂರಕ್ಷಿಸಲು ತಕ್ಷಣದ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು.

11. ಕೃಷಿ ಮಾರುಕಟ್ಟೆ ಕಾಯಿದೆ : ಕೃಷಿ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಕಾಯಿದೆಯಂತೆ ಕೊಬ್ಬರಿಯನ್ನು ರೈತರ ಪ್ರತ್ಯೇಕ ಲಾಟ್ ಆಧಾರಿತ ಟೆಂಡರಿಂಗ್ ಮತ್ತು ಉತ್ಪನ್ನ ಗುಣಮಟ್ಟದ ಆಧಾರದಲ್ಲಿ ಶ್ರೇಣೀಕರಣವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು. ರೈತರ ಉತ್ಪನ್ನಗಳನ್ನು ಟೆಂಡರ್ ಮಾಡುವಾಗ, ಪೂರೈಕೆ ಸರಪಳಿಯಲ್ಲಿ ಮಧ್ಯವರ್ತಿಗಳ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡುವುದು ಹಾಗು ರೈತರಿಗೆ ಅಂತಿಮ ಮಾರುಕಟ್ಟೆ ಬೆಲೆಯಲ್ಲಿ ನ್ಯಾಯಯುತ ಪಾಲನ್ನು ಪಡೆಯುವುದನ್ನು ಸರ್ಕಾರ ಕೂಡಲೇ ಖಚಿತಪಡಿಸಿಬೇಕು.

ಪ್ರಕಟಣೆ: 

ಬಿ. ಯೋಗೀಶ್ವರಸ್ವಾಮಿ
ಜಯಚಂದ್ರ ಶರ್ಮ
ದೇವರಾಜು ಟಿ.ಎಸ್
ಮನೋಹರ್ ಪಟೇಲ್
ಶ್ರೀಕಾಂತ್ ಕೆಳಹಟ್ಟಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಸಾಮೂಹಿಕ ನಾಯಕತ್ವ), ತಿಪಟೂರು ಘಟಕ, ತುಮಕೂರು, ಕರ್ನಾಟಕ

LEAVE A REPLY

Please enter your comment!
Please enter your name here