ಕೃಷಿ ಕುಟುಂಬಗಳಿಗೆ ಸಂತಸದ ಸುದ್ದಿ ; ಯಶಸ್ವಿನಿ ಯೋಜನೆ ಮರು ಜಾರಿ

0

ಬೆಂಗಳೂರು: ಕೃಷಿಕರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಅವರಿಗೆ ಆರೋಗ್ಯ ವಿಮೆ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವ ಯಶಸ್ವಿನಿ ಯೋಜನೆ ಮರು ಅನುಸ್ಠಾನಗೊಂಡಿದೆ.

ಈ ಸಂಬಂಧ  ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ  ಸೂಚನೆಯಂತೆ ಸಹಕಾರ ಇಲಾಖೆಯ ಸಚಿವಾಲಯ ಇಂದು ಅಂದರೆ ಅಕ್ಟೋಬರ್ 12, 2022ರಂದು  ಆದೇಶ ಹೊರಡಿಸಿದೆ. ಇದರಿಂದ ಅಪಾರ ಸಂಖ್ಯೆಯ ಕೃಷಿಕರಿಗೆ ನೆರವಾಗಲಿದೆ.

ಈ ಆದೇಶದಂತೆ ಯಶಶ್ವಿನಿ ಯೋಜನೆ ನವೆಂಬರ್ 01, 2022ರಿಂದ ಅನುಷ್ಠಾನಗೊಳ್ಳಲಿದೆ.  2022 – 2023ನೇ ಸಾಲಿನ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ ಯೋಜನೆಯನ್ನು ಪರಿಷ್ಕರಣಗೊಳಿಸಿ ಮರುಜಾರಿಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಈ ಹಿಂದೆ ರಾಜ್ಯ ಸರ್ಕಾರದ ಆದೇಶದಂತೆ ಸಹಕಾರ ಇಲಾಖೆ 2003ರಲ್ಲಿ ಯಶಸ್ವಿನಿ ಯೋಜನೆ ಜಾರಿಗೊಳಿಸಿತ್ತು. ಇದೇ ಇಲಾಖೆಯಡಿ 2018ರ ತನಕ ಯೋಜನೆ ಜಾರಿಯಲ್ಲಿತ್ತು. ಬಳಿಕ  ಯೋಜನೆ ಆರೋಗ್ಯ ಇಲಾಖೆಗೆ ವರ್ಗಾವಣೆಗೊಂಡು ಸ್ವಲ್ಪ ಸಮಯ  ಸ್ಥಗಿತಗೊಂಡಿತ್ತು. ಈ ನಂತರ ಜೂನ್ 01, 2018ರಲ್ಲಿ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿತು..

ಯಶಸ್ವಿನಿ ಯೋಜನೆ ಮರು ಜಾರಿಗೆ ರಾಜ್ಯದ ಸಹಕಾರಿ ಸಂಸ್ಥೆಗಳ ಸದಸ್ಯರು, ರೈತರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಮರು ಜಾರಿಗೊಳಿಸಿದೆ. ಇದಕ್ಕಾಗಿ  ಬಜೆಟಿನಲ್ಲಿ 300 ಕೋಟಿ ಅನುದಾನ ಒದಗಿಸಲಾಗಿದೆ.

ಮುಖ್ಯವಾಗಿ ಈ ಯೋಜನೆ ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ರಚಿತವಾಗಿದೆ.  ಹಾಲು ಮಹಾ ಮಂಡಳಿಗೆ ಹಾಲು ಪೂರೈಕೆ ಮಾಡುವ ಹೈನುಗಾರರು, ಸಹಕಾರ ಸಂಘಗಳ ಸದಸ್ಯರಾಗಿರುವ ರೈತರಿಗೂ ಇದರ ಪ್ರಯೋಜನ ದೊರೆಯಲಿದೆ. ಈ ಯೋಜನೆ ಜಾರಿಗಾಗಿ  “ಯಶಸ್ವಿನಿ ಸಹಕಾರ ಸದಸ್ಯರ  ಆರೋಗ್ಯ ಟ್ರಸ್ಟ್  ರಚಿತಗೊಂಡಿದೆ.. ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿರುತ್ತಾರೆ. ಸದಸ್ಯತ್ವ ನೋಂದಣಿ ಪ್ರಕ್ರಿಯೆ ಇದೇ ನವೆಂಬರ್ 1ನೇ ತಾರೀಖಿನಿಂದ ಆರಂಭವಾಗಲಿದೆ.

LEAVE A REPLY

Please enter your comment!
Please enter your name here