ಹಾವೇರಿ, ಮಾ.14: ಆತ್ಮಹತ್ಯೆಯೊಂದೇ ಪರಿಹಾರವಲ್ಲ.ಸಮಸ್ಯೆ ಬಂದಾಗ ಎದುರಿಸಿ ಗಟ್ಟಿಯಾಗಿ ನಿಲ್ಲುವ ಆತ್ಮಸ್ಥೈರ್ಯವನ್ನು ರೈತರು ಬೆಳೆಸಿಕೊಳ್ಳಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರೈತ ಬಾಂಧವರಲ್ಲಿ ಮಾನವಿ ಮಾಡಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಗ್ರಾಮದ ಹೊನ್ನಪ್ಪ ರೈತ ಬೀರಪ್ಪ ಪುಟ್ಟಕ್ಕನವರ ಅವರನ್ನು ಭೇಟಿಯಾಗಿ ರೈತರ ಮನೋಬಲ ತುಂಬಿದರು. ಆತ್ಮಹತ್ಯೆ ಅಂತಿಮ ಎನ್ನುವ ಭಾವವನ್ನು ತೊರೆಯಬೇಕು. ಸರ್ಕಾರ ರೈತರ ಬೆಂಬಲಕ್ಕೆ ಸದಾ ಸಿದ್ಧವಿದ್ದು ಸಮಸ್ಯೆಗಳಿಗೆ ಪರಿಹಾರ ನೀಡಲು ಬದ್ಧವಾಗಿದೆ. ರೈತ ಭೂಮಿ ತಾಯಿಯ ಸೇವೆ ಮಾಡಿ ಅನ್ನದಾತ ಎನಿಸಿಕೊಂಡಿದ್ದಾನೆ. ಅನ್ನದಾತನ ಕಣ್ಣೀರು ಒರೆಸಲು ಹಾಗೂ ರೈತರ ಬೆಂಬಲಕ್ಕೆ ತಾವು ಇರುವುದಾಗಿ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯವರು ಸಕಾಲಕ್ಕೆ ಕಬ್ಬು ಖರೀದಿಸದ ಕಾರಣ ರೈತರಿಗೆ ಕಷ್ಟವಾಗಿದೆ ಎಂದು ರೈತರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದಾಗ, ಸಂಬಂಧಪಟ್ಟ ಕಾರ್ಖಾನೆಯವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.































