ಬೆಂಗಳೂರು,ಮಾ‌16: ಕೃಷಿ ಇಲಾಖೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅಂತರಗಂಗೆ ಕಾರ್ಪೋರೇಷನ್ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ಸ್ಥಾಪನೆಗೆ 2011 ಮತ್ತು  2018 ರಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು..

ವಿಧಾನಸಭೆಯಲ್ಲಿ ಸದಸ್ಯ ವೀರಭದ್ರಯ್ಯ ಎಂ.ವಿ.ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯದ ಪರಿಸ್ಥಿತಿಯ ಮಳೆ ಹಂಚಿಕೆ, ಅಂತರ್ಜಲ ಮಟ್ಟವನ್ನು ಗಮನಿಸಿದಾಗ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಒತ್ತು ನೀಡುವುದು ಅನಿವಾರ್ಯವಾಗಿರುವುದರಿಂದ ನಿಗಮದ ಅವಶ್ಯಕತೆಯಿರುತ್ತದೆ. ಈ ನಿಟ್ಟಿನಲ್ಲಿ ಅಂತರಂಗೆ ಕಾರ್ಪೋರೇಷನ್ ಪ್ರಾರಂಭಿಸಲಾಗಿದೆ ಎಂದರು.

2014 ರಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು, 2015ರಲ್ಲಿ ನೋಂದಣಿ ಮಾಡಲಾಗಿದೆ. 2019-20ರಲ್ಲಿ 336 ಕೋಟಿ ರೂ.ಗಳನ್ನು ಯೋಜನೆಗಾಗಿ ಬಜೆಟ್‌ನಲ್ಲಿ ಇಡಲಾಗಿದ್ದು, 269 ಕೋಟಿ ರೂ.ಬಿಡುಗಡೆಯಾದ ಹಣದಲ್ಲಿ 254ಕೋಟಿ ರೂ.ಗಳನ್ನು ಯೋಜನೆಗಾಗಿ ವ್ಯಯಿಸಲಾಗಿದೆ ಎಂದರು.

ಹನಿ, ತುಂತುರು ಮತ್ತು ರೈನ್‌ಗನ್ ಘಟಕಗಳನ್ನು ಅನುಷ್ಠಾನ ಮಾಡುವುದು, ರೈತರಿಗೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ಸಮಯೋಚಿತ ಮತ್ತು ರೈತರಿಗೆ ತ್ವರಿತವಾಗಿ ವಿತರಿಸುವುದು. ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಿಯಾಯಿತಿ ಯೋಜನೆಗಳ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಉಪಯುಕ್ತತೆ ಕುರಿತು ರೈತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಮುಂತಾದ ಇಲಾಖೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಏಕಗವಾಕ್ಷಿ ಮಾದರಿಯಲ್ಲಿ ನಿಗಮದಿಂದ ಅನುಷ್ಠಾನ ಮಾಡುವುದರಿಂದ ರಿಯಾಯಿತಿ ಸೌಲಭ್ಯ ಪುನರಾವರ್ತನೆ ಮತ್ತು ಅನುದಾನ ದುರ್ಬಳಕೆಗಳನ್ನು ತಡೆಯಬಹುದಾಗಿದೆ. ಫಲಾನುಭವಿಗಳ ಅರ್ಜಿ ಸ್ವೀಕೃತಿ ಪ್ರಕ್ರಿಯೆಯಿಂದ ಅನುಷ್ಠಾನದವರೆಗೆ ಗಣಕೀರಿಸಲಾಗುವುದು ಎಂದು ನಿಗಮದ ಉದ್ದೇಶವನ್ನು ಸಚಿವರು ವಿವರಿಸಿದರು.

ಸೂಕ್ಷ್ಮ ನೀರಾವರಿ ಅನುಷ್ಠಾನದಲ್ಲಿ ರಸಾವರಿ ಕಡ್ಡಾಯವಾಗಿಲ್ಲ.ಇಲಾಖೆಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಒಂದಾಗಿ ಪರಿಗಣಿಸಲಾಗುತ್ತಿದೆ.ಪ್ರಸ್ತುತ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳು ಕೃಷಿ, ತೋಟಗಾರಿಕೆ, ರೇಷ್ಮೆಯ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿವೆ. ರೈತರು ಬೇರೆಬೇರೆ ಬೆಳೆಗಳಿಗೆ ಪ್ರತ್ಯೇಕ ಅರ್ಜಿಗಳನ್ನು ನೀಡಬೇಕಾಗಿರುತ್ತದೆ.ಪ್ರಸ್ತುತ ರೇಷ್ಮೆ ಇಲಾಖೆ ಹೊರತುಪಡಿಸಿ ಇಲಾಖೆವಾರು ಪ್ರತ್ಯೇಕ ತಂತ್ರಾಂಶಗಳಿದ್ದು ರೈತರು ಎಲ್ಲ ಇಲಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here