ಇಂದಿಗೂ ನಗರ – ಗ್ರಾಮೀಣ ಭಾಗದ ಸಾಕಷ್ಟು ಮಂದಿ ಯುವಜನತೆಯಲ್ಲಿ ಕೃಷಿ ಮಾಡುವು ಕುರಿತು ಕೀಳರಿಮೆ ಭಾವವಿದೆ. ಇದನ್ನವರು ತೊರೆಯಬೇಕು. ಅನ್ನದಾತರ ಮಹತ್ವ ಅರಿಯಬೇಕು. ಲಾಕ್ಡೌನ್ ಸಂದರ್ಭದಲ್ಲಿ ಬಹುತೇಕ ಕ್ಷೇತ್ರಗಳು ಸ್ಥಗಿತವಾಗಿತ್ತು. ಒಂದುವೇಳೆ ಕೃಷಿಕ್ಷೇತ್ರವೂ ತಟಸ್ಥವಾಗಿದ್ದರೆ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತಿತ್ತು. ಆದರೆ ಕೃಷಿಯೋಧರು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ 55ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಲಾಕ್ಢೌನ್ ಸಮಯದಲ್ಲಿ ಕೃಷಿಕಾರ್ಯಗಳಿಗೆ ಅಡಚಣೆಯಾಗದಂತೆ ಗ್ರೀನ್ ಕಾರ್ಡ್ ವಿತರಿಸಲಾಗಿತ್ತು. ಸದ್ಯದಲ್ಲಿಯೇ ಇವರೆಲ್ಲರಿಗೂ ಶಾಶ್ವತ ಗುರುತಿನಚೀಟಿ ನೀಡಲಾಗುವುದು. ಇದರಲ್ಲಿ ಅವರ ವೈಯಕ್ತಿಕ ವಿವರದ ಜೊತೆ ಅವರು ಮಾಡುತ್ತಿರುವ ಕೃಷಿಯ ಸಮಗ್ರ ವಿವರಗಳು ಅಡಕವಾಗಿರುತ್ತವೆ ಎಂದರು.
ಇಂದಿಗೂ ಸಾಕಷ್ಟು ಮಂದಿ ರೈತರು ಕೃಷಿಯಲ್ಲಿ ಏನೇ ಸಮಸ್ಯೆ ಬಂದರೂ ರಾಸಾಯನಿಕ ಗೊಬ್ಬರ – ಕೀಟನಾಶಕ ಮಾರುವ ಅಂಗಡಿಗಳವರನ್ನೇ ಪರಿಹಾರ ಕೋರುವ ಸ್ಥಿತಿ ಇದೆ. ಈ ಅಂಗಡಿಗಳವರು ತಮಗೆ ಯಾರು ಹೆಚ್ಚು ಕಮೀಷನ್ ಕೊಡುವ, ವಿದೇಶಿ ಪ್ರವಾಸಗಳಿಗೆ ಕಳಿಸುವ ಕಂಪನಿಗಳ ಉತ್ಪನ್ನಗಳನ್ನೇ ಬಳಸಿ ಎಂದು ಸಲಹೆ ನೀಡುತ್ತಾರೆ. ಇಂಥ ಪ್ರವೃತ್ತಿಯನ್ನು ಬಿಟ್ಟು ಕೃಷಿ ಸಮಸ್ಯೆಗಳು ಎದುರಾದಾಗ ಕೃಷಿವಿಜ್ಞಾನಿಗಳನ್ನು ಸಂಪರ್ಕಿಸಬೇಕು.
ಇದಕ್ಕಾಗಿ ರೈತಸಂಪರ್ಕ ಕೇಂದ್ರಗಳ ಜೊತೆ ಕೃಷಿ ವಿಜ್ಞಾನಿಗಳನ್ನು ನಿಯೋಜಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿಯೂ ಹಿರಿಯ ವಿಜ್ಞಾನಿಗಳು –ಸಂಶೋಧಕರು ಇರುತ್ತಾರೆ. ಇವರು ತಮಗೆ ಜವಾಬ್ದಾರಿ ವಹಿಸಿದ ಕೇಂದ್ರ – ತಾಲ್ಲೂಕಿಗೆ ತೆರಳುವ ಮುನ್ನ ಇದರ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಕೃಷಿವಿಜ್ಞಾನಿಗಳು ಸಹ ವಿಶ್ವವಿದ್ಯಾಲಯದ ಆವರಣಕ್ಕಷ್ಟೇ ಸೀಮಿತರಾಗದೇ ರೈತರೊಂದಿಗೆ ಹೆಚ್ಚೆಚ್ಚು ಬೆರೆಯಬೇಕು, ಇದರಿಂದ ಕೃಷಿಯಲ್ಲಿ ಏನೇ ಸಮಸ್ಯೆ ಬಂದರೂ ಶೀಘ್ರ ಪರಿಹಾರ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಇಡೀ ರಾಷ್ಟ್ರದಲ್ಲಿ ಕೃಷಿ ವಿಶ್ವವಿದ್ಯಾಲಯ, ಬೆಂಗಳುರು ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ಇದುವರೆಗೂ ಇಲ್ಲಿನ ವಿಜ್ಞಾನಿಗಳು 200ಕ್ಕೂ ಹೆಚ್ಚು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಉತ್ಪಾದನೆ ಹೆಚ್ಚಾಗಿದೆ ಎಂದು ಶ್ಲಾಘಿಸಿದರು. ರಾಜ್ಯದ ಎಲ್ಲ ಕೃಷಿ ವಿಶ್ವದ್ಯಾಲಯಗಳು ಸಂಶೋಧನೆಯಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಂಡು ಅಧಿಕ ಇಳುವರಿ ನೀಡುವ ತಳಿಗಳನ್ನು ಹೆಚ್ಚಿಸಬೇಕು. ಶೇಂಗಾದಲ್ಲಿ ಇಂಥ ತಳಿಗಳ ಕೊರತೆಯಿಂದಾಗಿ ಬೆಳೆಗಾರರು ತಕ್ಷಣಕ್ಕೆ ದೊರೆತ ತಳಿ ಶೇಂಗಾವನ್ನೇ ಬಿತ್ತಿ ಕಡಿಮೆ ಇಳುವರಿ ಪಡೆಯುತ್ತಿದ್ದಾರೆ ಎಂದರು
ಕೊಪ್ಪಳದ 20 ರೈತ ಸಂಪರ್ಕ ಕೇಂದ್ರಗಳಿಗೆ ಸಂಚಾರಿ ಕೃಷಿ ಪ್ರಯೋಗಾಲಯ ನೀಡಲಾಗಿದೆ. ಇದು 108 ಆಂಬುಲೆನ್ಸ್ ಮಾದರಿ ಕಾರ್ಯನಿರ್ವಹಿಸುತ್ತವೆ. ಜಿಲ್ಲೆಯ ಯಾವುದೇ ಭಾಗದ ರೈತರು ಕರೆ ಮಾಡಿದರು ಅವರ ಜಮೀನುಗಳಿಗೆ ಹೋಗಿ ಮಣ್ಣು, ಬೆಳೆ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ಸಂಚಾರಿ ಪ್ರಯೋಗಾಲಯದಲ್ಲಿ ಕೃಷಿ ಡಿಪ್ಲೊಮ ಪಡೆದವರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗುತ್ತದೆ ಸದ್ಯದಲ್ಲಿಯೇ ಈ ಲ್ಯಾಬ್ ಗಳ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸಿ ಇತರೆಡೆಗೆ ಸೇವೆ ಸಲ್ಲಿಸಲು ನಿಯೋಜಿಸಲಾಗುವುದು ಎಂದು ವಿವರಿಸಿದರು.

ಬಾಳೆ ಸಂಶೋಧನಾ ಕೇಂದ್ರ, ತಿರುಚ್ಚಿ, ತಮಿಳುನಾಡು ಇಲ್ಲಿನ ಕೃಷಿವಿಜ್ಞಾನಿ ಡಾ. ಉಮಾ ಅವರಿಗೆ ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಹಳೆಯ ವಿದ್ಯಾರ್ಥಿ, ಸಿಂಗಪೂರ್ ನಲ್ಲಿರುವ ಟೇಸ್ಟಿ ಬೈಟ್ ಈಟಬಲ್ಸ್ ಲಿಮಿಟೆಡ್ ಅಧ್ಯಕ್ಷರಾದ ಡಾ. ಅಶೋಕ್ ವಾಸುದೇವನ್ ಅವರು ಅಂತರ್ಜಾಲದ ಮೂಲಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕೃಷಿ ವಿಶ್ವವಿದ್ಯಾನಿಲಯಗಳು ಹಸಿರು ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ದೇಶದ ಸಮಗ್ರ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿವೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದು, ಹಾಲು ಮತ್ತು ತರಕಾರಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದು ಇದಕ್ಕೆ ಸಾಕ್ಷಿ. ಆರೋಗ್ಯವಂತ ರೈತರಿಂದ ಮಾತ್ರ ಸಮೃದ್ಧ ಭಾರತ ಕಟ್ಟಲು ಸಾಧ್ಯ. ರೈತರು ಉದ್ದಿಮೆದಾರರ ಮಾದರಿಯೂ ಆಲೋಚನೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ದೇಶದಲ್ಲಿಯೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ರೈತರಿಗೆ ಸದಾಕಾಲ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿಯೆಂದರೆ ಕೃಷಿ ಮೇಳ-2020ಅನ್ನು ಭೌತಿಕವಾಗಿ ಮತ್ತು ಡಿಜಿಟಲ್ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿಸಿ ರೈತರ ಪ್ರಶಂಸೆಗೆ ಪಾತ್ರವಾಗಿರುವುದು ಎಂದರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಡಾ. ಪಿ.ಹೆಚ್.ರಾಮಾಂಜಿನಿ ಗೌಡ, ಟಿ.ಎಂ. ಅರವಿಂದ್, ಶ್ರೀ ಓ.ಎಸ್. ದಯಾನಂದ, ಶ್ರೀ ಸುರೇಶ್ ಮಾರ್ಗದ್, ಶ್ರೀ ಆರ್. ಶ್ರೀರಾಮ, ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ, ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ, ನಾಗಮ್ಮ ದತ್ತಾತ್ರೇಯ ರಾವ್ ದೇಸಾಯಿ ಪ್ರಶಸ್ತಿ, ಜುವಾರಿ ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯುತ್ತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಮತ್ತು ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

2 COMMENTS

  1. ಮಣ್ಣು ಪರೀಕ್ಷೆ ಮತ್ತು ಗೊಬ್ಬರ ಬಳಕೆ ಬಗ್ಗೆ ತಿಳಿಸುವುದು ಉತ್ತಮ

LEAVE A REPLY

Please enter your comment!
Please enter your name here