ಆರ್‌ಸಿಇಪಿ ಒಪ್ಪಂದ, ದೇಶದ ಮಿಲ್ಕ್ ಡೈರಿ ಕ್ಷೇತ್ರಕ್ಕೆ ಕುತ್ತು ?

RCEP ಭಾರತದ Act East Policy ಗೆ ಒಂದು ಮೆಟ್ಟಿಲು ಆಗಿರಬಹುದು, ಆದರೆ, ಪ್ರಸ್ತುತ ಭಾರತದ ಕುಸಿಯುತ್ತಿರುವ ಮಾರುಕಟ್ಟೆ, ಉದ್ಯೋಗ ಮತ್ತು ಆರ್ಥಿಕವಾದ ರಚನಾತ್ಮಕ ಸಮಸ್ಯೆಗಳನ್ನು ಗಮನಿಸಿದರೆ ಹಾಗೂ ಅಮೇರಿಕ-ಚೀನಾ ದೇಶಗಳು ವ್ಯಾಪಾರ - ಯುದ್ಧದ ಸಮಯದಲ್ಲಿ ಪ್ರದರ್ಶಿಸುತ್ತಿರುವ ವ್ಯಾಪಾರ ರಕ್ಷಣಾವಾದ ಹಿನ್ನೆಲೆಯಲ್ಲಿ (RCEP ಮೂಲಕ) ನಮ್ಮ ಮಾರುಕಟ್ಟೆಯನ್ನು ಚೀನಾಕ್ಕೆ ತೆರೆಯುವುದು ವಿನಾಶಕಾರಿ ಎಂದು ಸಮಯ ಸಾಬೀತುಪಡಿಸಬಹುದು. ಆದ್ದರಿಂದ, ಆರ್‌ಸಿಇಪಿ ಮಾತುಕತೆಗಳನ್ನು ಮುಕ್ತಾಯಗೊಳಿಸುವ ಮೊದಲು ದೇಶೀಯ ಮಾರುಕಟ್ಟೆಯಲ್ಲಿನ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸುವುದು ಬಹಳ ಮುಖ್ಯ.

2
ಲೇಖಕರು: ಮನೋಹರ್

ಇತ್ತೀಚೆಗೆ ನವದೆಹಲಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತದ ರೈತಸಂಘಗಳ ಪ್ರತಿನಿಧಿಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವನ್ನು (ಆರ್‌ಸಿಇಪಿ) ಸರ್ವಾನುಮತದಿಂದ ತಿರಸ್ಕರಿಸಿದವು. RCEPಯ ಈ ಭಾರಿ-ವ್ಯಾಪಾರ ಒಪ್ಪಂದವು ಕೃಷಿಜೀವನೋಪಾಯ, ಬೀಜಗಳ ಮೇಲೆ ಸ್ವಾಯತ್ತತೆ ಮತ್ತು ದೇಶದ ಸ್ವಾವಲಂಬಿ ಸಹಕಾರಿ_ಡೈರಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ರೈತಪರ ಸಂಘಟನೆಗಳು ಎಚ್ಚರಿಸಿದೆ.

ಒಪ್ಪಂದಕ್ಕೆ ಸಹಿಮಾಡಿ ಮುಗಿಸಲು ಉತ್ಸುಕರಾಗಿರುವ ಚೀನಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಆಸಿಯಾನ್ ನಂತಹ ಇತರ 16 ಮಾತುಕತೆ ನಡೆಸುವ ದೇಶಗಳ ಒತ್ತಡಕ್ಕೆ ತಲೆಬಾಗಬೇಡಿ ಎಂದು ಭಾರತ ಸರ್ಕಾರವನ್ನು ರೈತ ಮುಖಂಡರು ಆಗ್ರಹಿಸುವ ಮೂಲಕ ಇಂಥ ಒಪ್ಪಂದ, ದೇಶದ ಸುಸ್ಥಿರತೆ ಮೇಲೆ ಉಂಟು ಮಾಡುವ ದುಷ್ಪರಿಣಾಮಗಳತ್ತ ಗಮನ ಸೆಳೆಯುವ ಕಾರ್ಯ ಮಾಡಿದರು.

ಈ ಒಪ್ಪಂದವು ದೊಡ್ಡ-ಭಾರಿ ಕೃಷಿ ವ್ಯವಹಾರಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತಿದ್ದು “ಭಾರತದ ಬೃಹತ್ ಮಾರುಕಟ್ಟೆಯಿಂದಾಗಿ ಆರ್‌ಸಿಇಪಿ ವ್ಯಾಪಾರ – ಪಾಲುದಾರರ ಪ್ರಯೋಜನಗಳನ್ನು ಆ ದೇಶಗಳಿಗೆ ಹೆಚ್ಚಿಸುತ್ತದೆ. ಆದರೆ ಒಪ್ಪಂದವನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಭಾರತವು 60,000 ಕೋಟಿಗಳಷ್ಟು ಆದಾಯವನ್ನು ಕಳೆದುಕೊಳ್ಳುತ್ತದೆ” ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಯುಧ್ವೀರ್ ಸಿಂಗ್ ಹೇಳಿದ್ದಾರೆ .

ಶೇಕಡ 92 ವಹಿವಾಟು ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕುವಂತೆ ಆರ್‌ಸಿಇಪಿ ಭಾರತವನ್ನು ಒತ್ತಾಯಿಸುತ್ತದೆ. ಭಾರತವು ಅಸ್ತಿತ್ವದಲ್ಲಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು ಹೊಂದಿರುವ ಆಸಿಯಾನ್ ಬ್ಲಾಕ್ನಿಂದ ಅಗ್ಗದ ಆಮದನ್ನು ಅನುಮತಿಸುವ ಮೂಲಕ 2018-2019ರಲ್ಲಿ ಭಾರತವು ಈಗಾಗಲೇ 26,000 ಕೋಟಿ ಆದಾಯವನ್ನು ಕಳೆದುಕೊಂಡಿದೆ.

“ಡೈರಿ ನಮ್ಮ ಅಲ್ಪ ಮತ್ತು ಸಣ್ಣ ರೈತರಿಗೆ ದೈನಂದಿನ ಹಣವನ್ನು ತರುತ್ತಿದೆ. ಅದರಲ್ಲಿ ಹೆಚ್ಚಿನವರು ಮಹಿಳೆಯರು. ಭಾರತವು ಈಗಾಗಲೇ ಡೈರಿಯಲ್ಲಿ ಸ್ವಾವಲಂಬಿಯಾಗಿದೆ. ಆದರೆ ಆರ್‌ಸಿಇಪಿ ಮೂಲಕ ವಿದೇಶಿ ಆಟಗಾರರಾದ ಫಾಂಟೆರಾ, ಡಾನೋನ್ ತಮ್ಮ ಹೆಚ್ಚುವರಿ ಉತ್ಪಾದನೆಯನ್ನು ನಮ್ಮ ದೇಶದಲ್ಲಿ ಸುರಿಯಲು ಬಯಸುತ್ತಾರೆ. ನಮಗೆ ಅಗತ್ಯವಿಲ್ಲದದ್ದನ್ನು ನಾವು ಏಕೆ ಆಮದು ಮಾಡಿಕೊಳ್ಳಬೇಕು? ನಮ್ಮ ಬಡ ರೈತರ ಜೀವನೋಪಾಯದ ಗತಿ ಏನೆಂದು ? ”ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕೈಟ್ ಕೇಳಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಎಂದರೆ ಏನು ?

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಎಂಬುದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ACEAN) ಮತ್ತ ಅದರ ಹತ್ತು ಸದಸ್ಯ ರಾಷ್ಟ್ರಗಳ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.

  • ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ACEAN) (ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್)
  • ಸದಸ್ಯ ರಾಷ್ಟ್ರಗಳು (ಬ್ರೂನೈ , ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ , ವಿಯೆಟ್ನಾಂ)

ಒಟ್ಟಾರೆಯಾಗಿ, ವಿಶ್ವದ ಅರ್ಧದಷ್ಟು ಜನಸಂಖ್ಯೆ ( 350 ಕೋಟಿ) ಮತ್ತು ಒಟ್ಟು ಜಿ.ಡಿ.ಪಿಯ ಸುಮಾರು 22.1 ಟ್ರಿಲಿಯನ್ ಡಾಲರ್, ಅಂದರೆ ಜಾಗತಿಕ ವ್ಯಾಪಾರದ ಮೂರನೆ ಒಂದು ಭಾಗದಷ್ಟು ಜಿ.ಡಿ.ಪಿಯನ್ನು ಈ (RCEP)  ಒಪ್ಪಂದದ ಮಾತುಕತೆಯನ್ನು ನೆಡೆಸುತ್ತಿರುವ 16 ರಾಷ್ಠ್ರಗಳಲ್ಲಿ ಒಳಗೊಂಡಿರುತ್ತದೆ.  2050 ಇಸವಿಯ ವೇಳೆಗೆ ಈ ದೇಶಗಳ ಜಿ.ಡಿ.ಪಿಯು 100 ಲಕ್ಷ ಕೋಟಿ ಡಾಲರ್ ಬೆಳವಣಿಗೆ ಕಾಣಬಹುದು ಎಂದು ಹೇಳಲಾಗಿದೆ

ಏಕೆ ಈ RCEP ಒಪ್ಪಂದ ?

ಅಮೇರಿಕದ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿ ಕೈಚಲ್ಲಿದ ಟ್ರಾನ್ಸ್-ಪೆಸಿಫಿಕ್  ಸಹಭಾಗಿತ್ವದ (TPP) ಒಪ್ಪಂದಕ್ಕೆ ಪ್ರತಿಕ್ರಿಯೆಯಾಗಿ  ಚೀನಾ ದೇಶವು ಅದನ್ನೆ ಇನ್ನೊಂದು ರೂಪದಲ್ಲಿ ಅದೇ ನೀತಿಗಳನ್ನು ಈ ಪ್ರಾದೇಶಿಕ ವ್ಯಾಪಾರ ಒಪ್ಪಂದದ ಮೂಲಕ ಈ (RCEP)  ತರಲು ಯತ್ನಿಸುತ್ತಿದೆ ಎಂದು ಬಿಂಬಿಸಲಾಗಿದೆ.

  • ಸರಕು ಮತ್ತು ಸೇವೆಗಳ ಮುಕ್ತ ವ್ಯಾಪಾರ, ಮುಕ್ತ ಹೂಡಿಕೆ, ಬೌದ್ಧಿಕ ಆಸ್ತಿಹಕ್ಕು ಮತ್ತು ವಿವಾದಗಳ ಬಗೆಗಿನ ಪರಿಹಾರವನ್ನು ಒಳಗೊಂಡಿರುವುದು ಈ ಒಪ್ಪಂದದ ಬಹುಮುಖ್ಯ ಅಂಶವಾಗಿದೆ. ಹಾಗೆ, ಮುಕ್ತ ವ್ಯಾಪಾರಕ್ಕಾಗಿ ಏಷ್ಯಾದ ದೇಶಗಳ ಎಷ್ಟು ಬದ್ಧತೆ ಹೊಂದಿದೆ ಎಂದು ತೋರಿಸಲು ಈ ಒಪ್ಪಂದ ಸಜ್ಜುಗೊಳ್ಳುತ್ತಿದೆ.

ಈ ಒಪ್ಪಂದದ ವ್ಯಾಪ್ತಿಯ ವಿಸ್ತಾರ ಮತ್ತು ಗಾತ್ರವು ಅಗಾಧವಾಗಿದ್ದು  ಸದಸ್ಯ ರಾಷ್ಠ್ರಗಳ ನಡುವೆ ನಡೆಯುವ ವಹಿವಾಟುಗಳಲ್ಲಿನ  ಶೇಕಡಾ 90 ಕ್ಕಿಂತ ಹೆಚ್ಚು ಸರಕುಗಳಿಗೆ ಶೇಕಡಾ 100% ಸುಂಕ ಕಡಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. RCEP ನಲ್ಲಿ ಭಾರತ ಭಾಗವಹಿಸುವುದರಿಂದ ಅದು ಭಾರತಕ್ಕೆ ನಿರ್ಣಾಯಕ ವೇದಿಕೆಯನ್ನು ಒದಗಿಸಲಿದ್ದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ದೇಶಗಳಲ್ಲಿನ ತನ್ನ ಕಾರ್ಯತಂತ್ರವನ್ನು ಮತ್ತು ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ತನ್ನ ಸ್ವಂತ ನೀತಿಯಾದ Act East Policy ಯನ್ನು ಮತ್ತಷ್ಟು ವಿಸ್ತರಿಸಲು ಪೂರಕವಾಗಿರುತ್ತದೆ ಎಂದು ಹೇಳಲಾಗಿದೆ.

ಭಾರತವು ತನ್ನ ವ್ಯಾಪಾರ ನಿಯಮಗಳನ್ನು ಮತ್ತಷ್ಟು ಸುಗಮಗೊಳಿಸಿ ವ್ಯಾಪಾರ ವೆಚ್ಚವನ್ನು ಕಡಿತಗೊಳಿಸಲು RCEP ಯು ಅನುಕೂಲಕರವಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಹಾಗೇ, ಈ ಒಡಂಬಡಿಕೆಯು ಭಾರತದ ಆಂತರಿಕ ಮತ್ತು ಹೊರಗಿನ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸುತ್ತದೆ, ಅದರಲ್ಲಿಯೂ ವಿಶೇಷವಾಗಿ ರಫ್ತು ಆಧಾರಿತ ಎಫ್‌ಡಿಐ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಭಾರತವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಇತ್ಯಾದಿ  ಸೇವಾ ಕ್ಷೇತ್ರಗಳಲ್ಲಿನ ತುಲನಾತ್ಮಕ ಅನುಕೂಲಗಳನ್ನು ಹೊಂದಿರುವ ಕಾರಣ RCEP ಭಾರತೀಯ ಕಂಪನಿಗಳಿಗೆ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ

 ಒಪ್ಪಂದದ ಕುರಿತಾಗಿನ ಟೀಕೆಗಳು ?

ಆದರೆ ಸದ್ಯ ಈ ಒಪ್ಪಂದವು ಯಾವುದೇ ಪರಿಸರ ಅಥವಾ ಕಾರ್ಮಿಕ ಮಾನದಂಡಗಳನ್ನು ಹೊಂದಿರದೆ, ಅಥವಾ ಖರೀದಿ ಪ್ರಕ್ರಿಯೆಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದರ ಎಂಬುದರ ಕುರಿತಾಗಿನ ವಿಚಾರಗಳನ್ನು ಪ್ರಸ್ತಾಪಿಸದಿರುವುದು  ಭಾರೀ ಟೀಕೆಗೆಗೊಳಾಗಿದೆ.

  • ಈ ಒಪ್ಪಂದವು ವಿಶ್ವದ ಬಹುತೇಕ ಬಡ ರಾಷ್ಠ್ರಗಳಿಗೆ ಜನರಿಕ್ ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸುತ್ತಿರುವ ಭಾರತವನ್ನು ದುಬಾರಿ ಬೆಲೆಗೆ ಮಾರುವಂತೆ ಒತ್ತಾಯಿಸಲಿದೆ ಎಂದು ಜಾಗತಿಕ ಆರೋಗ್ಯ ಕಾರ್ಯಕರ್ತರು ಟೀಕಿಸುತ್ತಿದ್ದಾರೆ. ಸದಸ್ಯ ರಾಷ್ಟ್ರಗಳ ನಡುವಿನಲ್ಲಿನ ಅಗಾಧ ಅಸಮಾನತೆಗಳಿದ್ದು ಈ ಒಪ್ಪಂದವು ಜಾಗತಿಕ ಅಸಮಾನತೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ. ಈ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಉದಾರೀಕರಣಕ್ಕೆ ಅವಕಾಶಗಳಿಲ್ಲವೆಂಬ ಬಗ್ಗೆಯೂ  ತಕರಾರಿದೆ

ಒಪ್ಪಂದದಿಂದ  ಭಾರತದ ಮೇಲಿನ ಪರಿಣಾಮ

ಇಲ್ಲಿಯವರೆಗೂ ಎಲ್ಲ ಮುಕ್ತವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿ ಭಾರಿ ಬೆಲೆ ತೆತ್ತಿರುವ  ಭಾರತವು ಪ್ರಸ್ತುತ  RCEP ಒಪ್ಪಂದಕ್ಕೆ ಸಹಿ ಮಾಡಿದಲ್ಲಿ ಇನ್ನು ಹೆಚ್ಚಿನ   ಬೆಲೆ ತರಬೇಕಾಗುತ್ತದೆ. ಭಾರತವು ಈಗಾಲೇ ತನ್ನ ವ್ಯಾಪಾರ ವಹಿವಾಟಿನಲ್ಲಿ ಭಾರಿ ವಿತ್ತೀಯ ಕೊರತೆಯನ್ನು ಎದುರುಸುತ್ತಿದೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ ಆಸಿಯಾನ್ ಮತ್ತು ಸಿಂಗಾಪುರ್, ಜಪಾನ್, ದಕ್ಷಿಣ ಕೊರಿಯಗಳ ನಡುವಿನ ಸುಂಕ ಮುಕ್ತ ವ್ಯಾಪಾರ ಒಪ್ಪಂದಗಳ ಪ್ರತಿಫಲನವಾಗಿದೆ ಎಂದು NITI Aayog ಹೇಳಿದೆ. ಈ ಒಪ್ಪಂದ ಪ್ರಕಾರ ಅಮದು ಸುಂಕವನ್ನು ತೆಗೆಯುವುದರಿಂದ ದೇಶದ  ವ್ಯಾಪಾರ ಕೊರತೆಯನ್ನು ಮತ್ತಷ್ಟು ಹದಗೆಡಿಸಿ ಕಸ್ಟಮ್ಸ್ ಆದಾಯದಲ್ಲಿ ಅಸಮತೋಲನ ಉಂಟಾಗಲಿದೆ ಎಂದು ಹೇಳಲಾಗಿದೆ.

  • ಭಾರತದಂತಯೇ ಸರಾಸರಿ ಸುಂಕವನ್ನು ಹೊಂದಿರುವ ಚೀನಾದಂತ ದೇಶವು ತಾನು ತನ್ನ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಮುಂದಾಗಿರುವುದಾಗಿ ಹೇಳುತ್ತಿದ್ದರು ಸಹ ಭಾರತೀಯ ಉತ್ಪನ್ನಗಳು  ಆ ಮಾರಕಟ್ಟೆಗೆ ಗಣನೀಯವಾಗಿ ಪ್ರವೇಶ ಹೆಚ್ಚಾಗುತ್ತದೆ ಎಂದು ಹೇಳಲಾಗುವುದಿಲ್ಲ. ಬದಲಾಗಿ ಚೀನಾದಿಂದ ಬರುವ ಕನಿಷ್ಟ 70% ರಷ್ಟು ಉತ್ಪನ್ನಗಳಿಗೆ ಸುಂಕವನ್ನು ತೆಗೆದರು ಕೂಡ ಅದು ಭಾರತೀಯ ಉದ್ಯಮಗಳನ್ನು  ಕದಡಿ ಬಿಡುತ್ತದೆ. ಇದಕ್ಕೆ ಮುಖ್ಯ ಕಾರಣ ಚೀನಾವು ತನ್ನ ಉದ್ಯಮಗಳಿಗೆ ಅನೈತಿಕವಾಗಿ ಭಾರಿ ಸಬ್ಸಿಡಿಗಳನ್ನು ಮತ್ತು ಸಾಲಗಳನ್ನು ನೀಡುತ್ತಿರುವುದಾಗಿದೆ.  

ಇತ್ತೀಚೆಗೆ RCEP ಒಡಂಬಡಿಕೆಯ ಪ್ರಸ್ತಾಪಿತ ಇಂಟಲ್ಕಚಲ್ ಪ್ರಾಪರ್ಟಿಯ ಅಧ್ಯಾಯದಲ್ಲಿನ ಸೋರಿಕೆಯಾದ ಮಾಹಿತಿಯಂತೆ RCEP ಎಲ್ಲ ಸದಸ್ಯ ರಾಷ್ಠ್ರಗಳು 1991 Act of the International Convention for the Protection of New Varieties of Plants (UPOV 1991) ನ ನಿಬಂಧನೆಗಳಿಗೆ ಒಳಪಟ್ಟು ಒಪ್ಪಂದಕ್ಕೆ ಪ್ರವೇಶಿಸಬೇಕಾಗಿರುತ್ತದೆ. ಈಗಾಲೇ RCEP ಯ 16 ಸದಸ್ಯ ದೇಶಗಳಲ್ಲಿ 7 ದೇಶಗಳು  (UPOV 1991) ನ ನಿಭಂಧನೆಗೆ ಒಳಪಟ್ಟಿದ್ದು ಉಳಿದಂತೆ ಒಂಬತ್ತು ಇತರೆ ದೇಶಗಳು ( ಥೈಲ್ಯಾಂಡ್, ಭಾರತ, ಇಂಡೂನೇಷ್ಯಾ ಮತ್ತು ಫಿಲಿಪೈನ್ಸ್ ಸೇರಿದಂತೆ) ತಮ್ಮ ಕೃಷಿ – ಆಹಾರ ನೀತಿಗಳ ಕಾನೂನುಗಳನ್ನು RCEP ಗೊಸ್ಕರ ಬದಲಾಯಿಸಿ ಕೊಳ್ಳಬೇಕಾಗಿದೆ. (UPOV 1991) ನ ನಿಭಂಧನೆಗಳು ರೈತರ ಬೀಜದ ಹಕ್ಕನ್ನು ಕಸಿದು ಸಸ್ಯ ತಳಿ ಅಭಿವೃದ್ದಿ ಕಂಪನಿಗಳಿಗೆ ಸಸ್ಯ ತಳಿಗಳ ಮೇಲೆ ಏಕಸೌಮ್ಯತ್ವ ಕಲ್ಪಿಸಿಕೊಡುತ್ತದೆ.

  • ಈ ನಿಭಂದನೆಯಡಿ ಸಂರಕ್ಷಿಸಲ್ಪಟ್ಟ ಕಂಪನಿಗಳ ಬಿತ್ತನೆಬೀಜ ಪ್ರಭೇದಗಳನ್ನು ರೈತರು ತಮಗಾಗಿ ಉಳಿಸಿಕೊಳ್ಳುವುದು ಅಥವಾ ಸಂರಕ್ಷಿಸಿಕೊಳ್ಳುವುದು ಕಾನೂನು ಬಾಹಿರ ಮತ್ತು ಅಪರಾಧವಾಗುತ್ತದೆ. The Central Statistics Office (CSO) ಪ್ರಕಾರ ಈ (UPOV 1991) ನ ನಿಭಂಧನೆಗಳಿಂದಾಗಿ  ಥೈಲ್ಯಾಂಡ್ ನಲ್ಲಿ 200% ರಿಂದ 600% ರಷ್ಟು ಮತ್ತು ಫಿಲಿಪೈನ್ಸಲ್ಲಿ 400% ರಷ್ಟು ಬಿತ್ತನೆಬೀಜದ ಬೆಲೆಗಳು ಈಗಾಗಲೇ ಹೆಚ್ಚಾಗಿವೆ ಎಂದು ಹೇಳಿದೆ.

RCEP ಯ ಮಾರುಕಟ್ಟೆ ಪ್ರವೇಶ ನಿಯಮಗಳು ಸರಕುಗಳ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವುದರ ಪರಿಣಾಮವಾಗಿ ಏಷ್ಯ ಮತ್ತು ಪೆಸಿಫಿಕ್ ನ ರಾಷ್ಠ್ರಗಳ ಭೌಗೋಳಿಕ ಪ್ರದೇಶಗಳಲ್ಲಿನ ಕೃಷಿ ರಾಸಾಯನಿಕಗಳ ಮಾರಾಟ ಮತ್ತು ಬಳಕೆಯನ್ನು ಕೂಡ ಹೆಚ್ಚಿಸುತ್ತದೆ, ಮತ್ತು RCEP ಯ ಐ.ಪಿ ಅಧ್ಯಾಯದಲ್ಲಿ ಇದರ ಡೆಟಾ ಎಕ್ಸ್ ಕ್ಲೂಸಿವಿಟಿಗೆ ಅವಕಾಶ ನೀಡಿರುವುದು ಅಂತಹ ಉತ್ಪನ್ನಗಳ ಪೇಟೆಂಟ್ ರಕ್ಷಣೆಯ ಅವಧಿಗಳನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ. ಇದು ಸದಸ್ಯ ದೇಶಗಳ ಆಹಾರದ ಬೆಲೆಗಳ ಏರಿಕೆಯಾಗುವಂತೆ ಹೆಚ್ಚಿನ  ಒತ್ತಡವನ್ನು ಬೀರಲಿದೆ.

RCEP ಯಿಂದ ಮತ್ತೊಂದು ಸ್ಪಷ್ಟ ಬೆದರಿಕೆಯೆನೆಂದರೆ ಅಂತರಾಷ್ಠ್ರೀಯ ಕಂಪನಿಗಳಿಂದ ಭೂ ಕಬ್ಬಳಿಕೆ ! 

  • RCEP ಯ ಒಡಂಬಡಿಕೆಯಲ್ಲಿನ ಸೋರಿಕೆಯಾದ ಬಂಡವಾಳ ಹೂಡಿಕೆ ಮತ್ತು ಸೇವಾ ಹೂಡಿಕೆ ಅಧ್ಯಾಯದಲ್ಲಿನ ಮಾಹಿತಿಯಂತೆ  ಸ್ಥಳೀಯ ಕೃಷಿಭೂಮಿಯನ್ನು ಖರೀದಿಸಲು ಬಯಸುವ ಅಂತರಾಷ್ಠ್ರೀಯ ಕಂಪನಿಗಳ ವಿರುದ್ದ RCEP ಸದಸ್ಯ ದೇಶಗಳು ತಾರತಮ್ಯ ಮಾಡಬಾರದು. ಎಂದು ಹೇಳಿರುತ್ತದೆ.

ಸೂಕ್ಷ್ಮ ಪಟ್ಟಿ:  ಹೆಚ್ಚಿನ RCEP ದೇಶಗಳು ಅಕ್ಕಿ, ಪಾದರಕ್ಷೆಗಳು, ಡೈರಿ ಉತ್ಪನ್ನಗಳು ಮತ್ತು ಜೇನುತುಪ್ಪದಂತಹ ಸೂಕ್ಷ್ಮ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ಹೊಂದಿರುತ್ತವೆ. ಅವುಗಳು RCEP ಯಡಿ ಈ ಸೂಕ್ಷ್ಮ ಪಟ್ಟಿಗಳ ಮೂಲಕ ಆ ಸೂಕ್ಷ್ಮ ಉತ್ಪನ್ನಗಳನ್ನು ರಕ್ಷಿಸಿಕೊಳ್ಳುವುದನ್ನು ಮುಂದುವರಿಸಬಹುದು. ಇದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಭಾರತೀಯ ವೃತ್ತಿಪರರು ಮತ್ತು ಕಾರ್ಮಿಕರು  ಆಸಿಯಾನ್ ದೇಶಗಳ ಸೇವಾ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲು ಆಸಿಯಾನ್ ದೇಶಗಳು ತಮ್ಮ ಸೇವಾ ಕ್ಷೇತ್ರವನ್ನು ತೆರೆಯಬೇಕು ಎಂದು ಭಾರತ ಒತ್ತಾಯಿಸುತ್ತಿದ್ದರೂ ಆ ದೇಶಗಳು ಉದ್ಯೋಗಗಳನ್ನು ಮತ್ತು ಇತರೆ ಸೇವಾ ವಲಯವನ್ನು ತಮ್ಮ ಸೂಕ್ಷ್ಮ ಪಟ್ಟಿಯಿಂದ ತೆಗೆಯಲು ಹಿಂಜರಿಯುತ್ತಿರುವುದ ಕಾರಣ RCEP ಯ ಒಪ್ಪಂದವು ಭಾರತದ ಮಾನವ ಸಂಪನ್ಮೂಲ ರಫ್ತಿಗೆ ದೊಡ್ಡ ಹಿನ್ನಡೆಯಾಗಿರುತ್ತದೆ.

  • RCEP ಭಾರತದ Act East Policy ಗೆ ಒಂದು ಮೆಟ್ಟಿಲು ಆಗಿರಬಹುದು, ಆದರೆ, ಪ್ರಸ್ತುತ ಭಾರತದ ಕುಸಿಯುತ್ತಿರುವ ಮಾರುಕಟ್ಟೆ, ಉದ್ಯೋಗ ಮತ್ತು ಆರ್ಥಿಕವಾದ ರಚನಾತ್ಮಕ ಸಮಸ್ಯೆಗಳನ್ನು ಗಮನಿಸಿದರೆ ಹಾಗೂ ಅಮೇರಿಕ-ಚೀನಾ ದೇಶಗಳು ವ್ಯಾಪಾರ – ಯುದ್ಧದ ಸಮಯದಲ್ಲಿ ಪ್ರದರ್ಶಿಸುತ್ತಿರುವ ವ್ಯಾಪಾರ ರಕ್ಷಣಾವಾದ ಹಿನ್ನೆಲೆಯಲ್ಲಿ (RCEP ಮೂಲಕ) ನಮ್ಮ ಮಾರುಕಟ್ಟೆಯನ್ನು ಚೀನಾಕ್ಕೆ ತೆರೆಯುವುದು ವಿನಾಶಕಾರಿ ಎಂದು ಸಮಯ ಸಾಬೀತುಪಡಿಸಬಹುದು. ಆದ್ದರಿಂದ, ಆರ್‌ಸಿಇಪಿ ಮಾತುಕತೆಗಳನ್ನು ಮುಕ್ತಾಯಗೊಳಿಸುವ ಮೊದಲು ದೇಶೀಯ ಮಾರುಕಟ್ಟೆಯಲ್ಲಿನ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸುವುದು ಬಹಳ ಮುಖ್ಯ.

2 COMMENTS

  1. ಮೋದಿಗೆ ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರು ಯಾರು?

    • ಸೂಕ್ಷ್ಮವಾದ ಈ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಭಾರತೀಯ ರೈತರು, ಹೈನುಗಾರರ ಹಿತಾಸಕ್ತಿ ಕಾಯುವುದು ಅತ್ಯಗತ್ಯ

LEAVE A REPLY

Please enter your comment!
Please enter your name here