ಪ್ರೀತಿ ಇಲ್ಲದಿದ್ದರೂ ಬದುಕಬಹುದು, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ

ಗಂಗಾತೀರದ ಪ್ರದೇಶಗಳಲ್ಲಿಯೇ ಅಂತರ್ಜಲ ಮಟ್ಟ ಕುಸಿದಿದೆ‌ ಎಂದ‌ಮೇಲೆ ಇನ್ನು ಒಣಪ್ರದೇಶಗಳ ಗತಿ ಏನು ? ಎಂಬುದನ್ನು ಅರಿತು ಎಚ್ಚೆತ್ತುಕೊಳ್ಳಬೇಕು.‌ ಅರಣ್ಯನಾಶ, ನಗರೀಕರಣ‌ ಮತ್ತು ಬದಲಾದ ಕೃಷಿ ಪದ್ಧತಿ, ಹೆಚ್ಚಾದ ಆಧುನಿಕ ಯಂತ್ರಗಳ ಬಳಕೆ, ರಾಸಾಯನಿಕ ಗೊಬ್ಬರಗಳ ಅತಿ ಬಳಕೆ ಹಾಗೂ ನೀರು ವಾತಾವರಣದ ಜಾಗೃತಿ ಇಲ್ಲದಿರುವುದು ಅಂತರ್ಜಲ ಮಟ್ಟ ಕುಸಿಯಲು ಕಾರಣ

0

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ‌ ಪ್ರಯುಕ್ತ ಬೆಂಗಳೂರು ಗಾಂಧಿಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ )  ಜಲಸಾಕ್ಷರತೆ ಮೂಡಿಸುವ ಜಲಶಕ್ತಿ ಅಭಿಯಾನ ಕಾರ್ಯಕ್ರಮ‌ ನೆರವೇರಿತು.


ಸಸಿಗೆ ನೀರುಣಿಸುವ ಮೂಲಕ ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೊಕಸಭಾ ಕ್ಷೇತ್ರದ ಸಂಸದ ಸದಾನಂದಗೌಡ ಚಾಲನೆ ನೀಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸದಾನಂದಗೌಡ, ನಾನು ಹಾಗೂ ನಾರಾಯಣಸ್ವಾಮಿ
ಸ್ಮಶಾನವನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಿದ್ದೇವೆ.ಸ್ಮಶಾನದಲ್ಲಿ  ಐದಾರು ಗೋಣಿಚೀಲ ಪ್ಲಾಸ್ಟಿಕ್ ಸಿಕ್ಕಿದ್ದು, ಅದನ್ನು ಪುನರ್ ಬಳಕೆ ಕೇಂದ್ರಕ್ಕೆ ನೀಡಲಾಗಿದೆ ಫೋಟೋಕ್ಕಾಗಿ ಕೆಲಸ ಆಗಬಾರದು. ಕೆಲಸಕ್ಕಾಗಿ ಫೋಟೋ ಆಗಬೇಕು ಎಂದು ಹೇಳಿದ್ದೇನೆ. ಗಾಂಧಿ ಜಯಂತಿ ಅರ್ಥಪೂರ್ಣವಾಗಬೇಕು ಎಂದರು.
ಯಾವುದೋ ಒಂದು ರೀತಿಯಲ್ಲಿ ಬದುಕಿನಲ್ಲಿ ಆಗಾಗ ಸವಾಲುಗಳನ್ನು ಎದುರಿಸುತ್ತಲೇ ಇರುತ್ತವೆ. ಸ್ವಚ್ಛತೆ ಕೇವಲ ಒಂದು ಯೋಜನೆಯಾಗಬಾರದು.ಸರ್ಕಾರಿ ಕಾರ್ಯಕ್ರಮಕ್ಕೆ ಮಾತ್ರ ಅದು ಮೀಸಲಾಗಬಾರದು. ಸ್ವಚ್ಛತೆ ಎನ್ನುವುದು ಪ್ರತಿಯೊಬ್ಬರ ಭಾಗ ಆಗಬಾರದು. ಸ್ವಾತಂತ್ರ ಸಂಗ್ರಾಮದಂತೆ ಸ್ವಚ್ಛತಾ ಸಂಗ್ರಾಮ ಆಗಬೇಕು ಎಂದರುಮ
1942ರಲ್ಲಿ ಸ್ವಾತಂತ್ರ ಸಂಗ್ರಾಮಕ್ಕೆ ವೇಗ ನೀಡಿದ್ದು ಗಾಂಧೀಜಿ. ಯಾವುದೋ ಒಂದು ಪಕ್ಷಕ್ಕೆ ಅದು ಸೀಮಿತವಾಗಬಾರದು ಎಂದು ಅವರು ಬಯಸಿದ್ದರು.‌ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಜನಾಂದೋಲನದಿಂದ ಮಾತ್ರ ಪರಿವರ್ತನೆ ಸಾಧ್ಯ ಎಂದರು. ಇದಕ್ಕಾಗಿ ಅವರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದರು.
ಗಾಂಧೀಜಿ ಆಕಾಂಕ್ಷೆ ಜಾರಿಗೊಳಿಸುವ ನಿಟ್ಟಿನಲ್ಲಿ 2014 ರಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಪರಿಕಲ್ಪನೆಗೆ ದಿಟ್ಟಹೆಜ್ಜೆ ಇಟ್ಟರು.‌ ದೇಶದ ಜನ ತಮ್ಮ ಆದಾಯದ ಪ್ರತಿಶತ ಹದಿನೈದರಷ್ಟು  ಭಾಗವನ್ನು ಆರೋಗ್ಯಕ್ಕಾಗಿ ವೆಚ್ಚ ಮಾಡುತ್ತಾರೆ ಎನ್ನುವುದನ್ನು ಅವರು ಅರಿತು 2017 ರಲ್ಲಿ ಸ್ವಚ್ಛತಾ ಆಂದೋಲನಕ್ಕೆ ವೇಗ ನೀಡಿದರು. ಸ್ವಚ್ಛತೆ ಮೂಲಕ ದೇಶದ ಆರೋಗ್ಯ ಕಾಪಾಡುವಂತೆ ಕರೆ ನೀಡಿದರು
ಕಳೆದ ಬಾರಿ ಕೇರಳ ಮುಳುಗಿ ಹೋಗಿತ್ತು. ಆದರೆ ಅದಾದ ಮೂರು ತಿಂಗಳ ಬಳಿಕ ಅಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿತ್ತು. ನಮ್ಮ ಕಾವೇರಿ ಪೈಪ್ ಲೈನ್ ಗಳಲ್ಲಿ ನೀರಿಗಿಂತ ಗ್ಯಾಸೇ ಹೆಚ್ಚಿಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೀತಿ ಆಯೋಗ 2030 ಕ್ಕೆ ಈಗಿರುವ ಅಗತ್ಯಕ್ಕಿಂತ ಎರಡುಪಟ್ಟು ನೀರು ಬೇಕು ಎಂದು‌ ಮುನ್ನೆಚ್ಚರಿಕೆ ನೀಡಿದೆ. ಸವಾಲನ್ನು ಈಗಲೇ ಎದುರಿಸಬೇಕೆಂದು ಮೋದಿ ಜಲಶಕ್ತಿಗೆ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ.‌ ಸ್ವಾತಂತ್ರ‌ಸಂಗ್ರಾಮ ಜನ್ಮಸಿದ್ಧ ಹಕ್ಕು ಎಂದು ಪಣತೊಟ್ಟಂತೆ ಸ್ವಚ್ಛತೆ ಮತ್ತು ಜಲ ಉಳಿತಾಯ ನಮ್ಮ ಸಂಗ್ರಾಮ ಆಗಬೇಕು.‌ ಜನರು ಉಳಿದರೆ ಮಾತ್ರ ಐಟಿಬಿಟಿ, ಸಮಾಜ ಉಳಿಯಲು ಸಾಧ್ಯ ಎಂದರು.
ಪ್ರೀತಿ ಇಲ್ಲದಿದ್ದರೆ ಬದುಕಬಹುದು.ನೀರಿಲ್ಲದೇ ಬದುಕಲು ಸಾಧ್ಯವಿಲ್ಲ.‌ ವಾಯು,‌ನೀರು ಮತ್ತು ಭೂಮಿ ಪ್ರಕೃತಿ ನೀಡಿದ‌ ಸಂಪತ್ತು. ಇವುಗಳಲ್ಲಿ ಸಮತೋಲನ‌ ಕಾಪಾಡಬೇಕು. ನೀರನ್ನು ಭೂಮಿಯಲ್ಲಿ ಉಳಿಸಬೇಕು.ಅಂತರ್ಜಲ ರಕ್ಷಣೆ ನಮ್ಮ ಕರ್ತವ್ಯ ಆಗಬೇಕು. ಮಳೆಕೊಯ್ಲು ಕಡ್ಡಾಯ ಆಗಬೇಕು. ನಮ್ಮ ಜಾಗದೊಳಗೆ‌ ಬೀಳುವ ಮಳೆನೀರನ್ನು ಸಂರಕ್ಷಿಸಬೇಕು, ಸಂಗ್ರಹಿಸಬೇಕು. ನಮ್ಮ ಜ್ವಲಂತ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕೇ ಹೊರತು ಬೇರೆಯವರ ಮೇಲೆ ಅವಲಂಬಿತರಾಗಬಾರದು ಎಂದು ಕರೆ ನೀಡಿದರು.
ಕಾಲಚಕ್ರದಲ್ಲಿ ಕೃಷಿಯೇ ಮುಂಚೂಣಿಯಲ್ಲಿರುವ ಕ್ಷೇತ್ರ. ಹೀಗಾಗಿ ರೈತರು ಆತಂಕಪಡಬೇಕಿಲ್ಲ. ದೇವರನ್ನೇ ನಂಬದವರು ಇದ್ದಾರೆ. ಕಾಲಚಕ್ರ ಬದಲಾಗುತ್ತಲೇ ಇದೆ. ಐಟಿಬಿಟಿ ಮಾಡಿದ ಮಕ್ಕಳು ಉದ್ಯೋಗಕ್ಕೆ ಹಾತೊರೆಯುತ್ತಾರೆ.ಆದರೆ ರೈತನ ಮಗ ಉದ್ಯೋಗಕ್ಕಾಗಿ ಹಾತೊರೆಯದೇ ತಾನೂ ದುಡಿದು ಇನ್ನೊಬ್ಬರಿಗೂ ಅನ್ನ ನೀಡುತ್ತಾನೆ . ರೈತರ ಆದಾಯ ದ್ವಿಗುಣಗೊಳಿಸುವುದು ಮೋದಿ ಅವರ ಗುರಿ ಎಂದರು.
ಕಳಸಾಬಂಡೂರಿ, ಕಾವೇರಿ ಸೇರಿದಂತೆ ನೀರಿಗಾಗಿ ರಾಜ್ಯರಾಜ್ಯಗಳ ನಡುವೆ ಸಮಸ್ಯೆಯೇ ಹೆಚ್ಚಾಗಿದೆ. ನೀರಿನ ಸಂರಕ್ಷಣೆ, ಕೆರೆಗಳ ಪುನರ್ಜೀವನ, ಜಲಾನಯನಪ್ರದೇಶಾಭಿವೃದ್ಧಿ, ಜನಪುನಶ್ಚೇತನ ಸೇರಿದಂತೆ‌ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ .ಕರ್ನಾಟಕದಲ್ಲಿ 65 ತಾಲೂಕುಗಳನ್ನು  ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ರಾಯಚೂರು ಹಾಗೂ ಯಾದಗಿರಿಗೆ ಸೌಲಭ್ಯ ನೀಡಲಾಗಿದೆ. ಇದೆಲ್ಲ ಪ್ರಚಾರಕ್ಕಾಗಿ ಅಲ್ಲ.‌ ಜಲಶಕ್ತಿ ನಮ್ಮ ಗುರಿ ನಮ್ಮ ಕನಸು ಎಂದು ಸದಾನಂದಗೌಡ ಸ್ಪಷ್ಟಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರಪ್ರಸಾದ್ ಮಾತನಾಡಿ, ನೀರಿನ ಪ್ರಾಮುಖ್ಯತೆಯನ್ನು ಗಾಂಧೀಜಿಯವರೇ ಹೇಳಿದ್ದಾರೆ.‌ನೀತಿ ಆಯೋಗ ಸಮೀಕ್ಷೆ ನಡೆಸಿ ಭಾರತ ಸುಮಾರು 600 ಮಿಲಿಯನ್ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚಿನ ಜನ ನೀರಿಗಾಗಿ ಸಂಕಷ್ಟ ಪಡುತ್ತಿದ್ದಾರೆ ಎಂದು ಹೇಳಿದೆ.ಪ್ರತಿವರ್ಷ ಅಂತರ್ಜಲ ಕುಸಿಯುತ್ತಲೇ ಇದೆ. ಹೀಗಾಗಿ ನೀರನ್ನು ಭೂಮಿಯಲ್ಲಿಯೇ ರಕ್ಷಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಗಂಗಾತೀರದ ಪ್ರದೇಶಗಳಲ್ಲಿಯೇ ಅಂತರ್ಜಲ ಮಟ್ಟ ಕುಸಿದಿದೆ‌ ಎಂದ‌ಮೇಲೆ ಇನ್ನು ಒಣಪ್ರದೇಶಗಳ ಗತಿ ಏನು ? ಎಂಬುದನ್ನು ಅರಿತು ಎಚ್ಚೆತ್ತುಕೊಳ್ಳಬೇಕು.‌ ಅರಣ್ಯನಾಶ, ನಗರೀಕರಣ‌ ಮತ್ತು ಬದಲಾದ ಕೃಷಿ ಪದ್ಧತಿ, ಹೆಚ್ಚಾದ ಆಧುನಿಕ ಯಂತ್ರಗಳ ಬಳಕೆ, ರಾಸಾಯನಿಕ ಗೊಬ್ಬರಗಳ ಅತಿ ಬಳಕೆ ಹಾಗೂ ನೀರು ವಾತಾವರಣದ ಜಾಗೃತಿ ಇಲ್ಲದಿರುವುದು ಅಂತರ್ಜಲ ಮಟ್ಟ ಕುಸಿಯಲು ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ವಿಜ್ಞಾನಿ ಡಾ.ಮಲ್ಲಿಕಾರ್ಜುನ್ ಮಾತನಾಡಿ, ನೀರಿನ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ನಡೆಯುತ್ತಿದೆ. 1256 ಜಿಲ್ಲೆಗಳ ಜಲಕ್ಷಾಮ ಭಾಗಗಳಲ್ಲಿ ಜಲಶಕ್ತಿ ಅಭಿಯಾನ ನಡೆಯುತ್ತಿದೆ. ಏಳು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಜಲಶಕ್ತಿ ಅಭಿಯಾನ ನಡೆಸಲಾಗುತ್ತಿದೆ. ಅನಾವೃಷ್ಟಿಯಿಂದ ಎರಡೂ ಹಾನಿಯೇ.ನೀರಿನ ಲಭ್ಯತೆ ದೇಶದಲ್ಲಿ ಕುಸಿಯುತ್ತಿದೆ.ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ‌  ನಡೆಯಬಹುದು ಎಂದು ಎಚ್ಚರಿಕೆ ನೀಡಿದರು.
ಸಮರ್ಪಕವಾಗಿ ಮಳೆ ಬೀಳುತ್ತಿಲ್ಲ.ಒಂದು ದಿನ ಹೆಚ್ಚಾದರೆ ಮತ್ತೊಂದು ದಿನ ತೀರಾಕಡಿಮೆಯಾಗುತ್ತಿದೆ.ಹೀಗೆ ಮಳೆಯಲ್ಲಿನ ವ್ಯತ್ಯಾಸ ರೈತರ ಬಾಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ.ಹೀಗಾಗಿ ನೀರಿನ ಮಹತ್ವದ ಕುರಿತು ಜಲಶಕ್ತಿ ಆಂದೋಲನ ಜಲಸಾಕ್ಷರತೆ ಮೂಡಿಸುವ ಕೆಲಸವನ್ನು ಕೃಷಿ ವಿಜ್ಞಾನ ಕೇಂದ್ರ‌ ಮಾಡುತ್ತಿದೆ ಎಂದರು.

ಮೇಲ್ಮನೆ ವಿಪಕ್ಷ ಉಪನಾಯಕ ಹೆಬ್ಬಾಳ ನಾರಾಯಣಸ್ವಾಮಿ, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಎಂ.ಜೆ. ಚಂದ್ರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here