
ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಮಲೆನಾಡಿನ ವಾಣಿಜ್ಯ ಬೆಳೆಗಳೆಲ್ಲವೂ ವಿವಿಧ ರೋಗಗಳಿಗೆ ತುತ್ತಾಗಿ ಗಾತ್ರ, ಗುಣಮಟ್ಟ, ಇಳುವರಿಗಳಲ್ಲಿ ಪಾತಾಳಕ್ಕೆ ಇಳಿದಿವೆ.
ಆದರೆ ಈ ಗೆಡ್ಡೆ ಗೆಣಸು ಬೆಳೆಗಳು ಮಾತ್ರ ಅತಿವೃಷ್ಟಿ, ಅಧಿಕ ತೇವಾಂಶ ಎಲ್ಲವನ್ನೂ ಸಹಿಸಿಕೊಂಡು, ಉತ್ತಮ ಗಾತ್ರ,ಇಳುವರಿ, ಗುಣಮಟ್ಟದ ಫಸಲು ನೀಡುತ್ತಿವೆ!
ಏನಿದರ ಗುಟ್ಟು? ” ಸಾಕು ಬಿಡು ನಿನ್ನ ಆಧುನಿಕತೆಯ ತೆವಲು, ಇದನ್ನು ತಿಂದು ಬದುಕಿಕೋ ಸಾಕು ” ಎನ್ನುತ್ತಿರಬಹುದೇ ಪ್ರಕೃತಿ?
ಆದರೆ ಕೆಲವೆಡೆ ಹೆಚ್ಚುತ್ತಿರುವ ಕಾಡು ಹಂದಿ, ಮುಳ್ಳು ಹಂದಿಗಳೊಂದಿಗೆ ಪ್ರಬಲ ಸ್ಪರ್ಧೆಯೂ ಅನಿವಾರ್ಯ. ಆಹಾರಕ್ಕಾಗಿ ಸ್ಪರ್ಧೆಯೂ ಪ್ರಕೃತಿಯ ನಿಯಮಗಳಲ್ಲೊಂದು ಎನ್ನಬಹುದೇನೋ.
ಮನುಷ್ಯನ ಮೂಲ ಆಹಾರವೂ, ಮಲೆನಾಡಿನ ಸ್ಥಳೀಯ ನೈಸರ್ಗಿಕ ಮೂಲದ ಆಹಾರಗಳಲ್ಲೊಂದಾದ ಈ ಗೆಡ್ಡೆ ಗೆಣಸುಗಳು ಭವಿಷ್ಯದ ಮುಖ್ಯ ಆಹಾರವೂ ಆಗಬಾರದೇಕೆ?
ಮನುಷ್ಯ ಕೃಷಿ ಕಲಿತು ಪ್ರಾರಂಭಿಸಿದ್ದು ಗೆಡ್ಡೆ ಗೆಣಸುಗಳನ್ನು ಬೆಳೆಯುವ ಮೂಲಕವೇ ಆದರೂ ನಂತರ ಧಾನ್ಯಗಳತ್ತ ವಾಲಿದ್ದು ಏಕೆ ? ಧಾನ್ಯಗಳನ್ನೇ ಮುಖ್ಯ ಆಹಾರವಾಗಿ ಅವಲಂಬಿಸಿದ್ದು ಏಕೆ ಎಂಬುದು ಮಾತ್ರ ಬಗೆಹರಿಯದ ಪ್ರಶ್ನೆ.