ಸೊರಗು ರೋಗ ನಿವಾರಕ ಟ್ರೈಕೋಡರ್ಮಾ !

0
ಲೇಖಕರು: ಮಂಜುನಾಥ ಹೊಳಲು

ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ ಜೀವನಾಧಾರ ಸ೦ಪತ್ತು. ಅತಿಯಾದ ಶೀಲಿಂದ್ರನಾಶಕಗಳ ಬಳಕೆಯಿಂದ ಮಣ್ಣು ಹಾಗು ನೀರು ಮಲೀನವಾಗಿದೆ. ಸಾವಯವ ಕೃಷಿಯಲ್ಲಿ ಟ್ರೈಕೋಡರ್ಮಾದ ಬಳಕೆ ಅತಿಮುಖ್ಯ.

ಸಾವಯವದ ಮಹತ್ವ ತಿಳಿದಮೇಲೆ, ಹಲವಾರು ಪರಿಸರ ಪೂರಕ ಮಾರ್ಗೋಪಾಯಗಳು ರೈತರ ಜಮೀನಿನಲ್ಲಿ ಅನುಶೋಧನೆಗೊಳಗೊಂಡವು. ರೋಗ ಮತ್ತು ಕೀಟಗಳ ಬಾಧೆ ಎಲ್ಲ ಬೆಳೆಗಳಲ್ಲೂ ಕಂಡು ಬರುತ್ತದೆ. ಅದರಲ್ಲೂ ಮಣ್ಣಿನಿಂದ ಬರುವ ರೋಗಗಳಿಂದ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಅದರಲ್ಲಿ ಕಿತ್ತಳೆ ಬೆಳೆಗೆ ಬೇರು ಕೊಳೆ ರೋಗ, ಕರಿಮೆಣಸಿನಲ್ಲಿ ಕಂಡು ಬರುವ ಸೊರಗುರೋಗ, ಶುಂಠಿಯಲ್ಲಿನ ಬೇರುಕಾಂಡ ಕೊಳೆ ರೋಗ, ಏಲಕ್ಕಿ ಗಿಡದ ಬೇರುಕಾಂಡ ಮತ್ತು ಕಾಯಿ ಕೊಳೆ ರೋಗಗಳು ಹಾಗೂ ತರಕಾರಿಗಳಲ್ಲಿ ಮಣ್ಣಿನಿಂದ ಬರುವ ಕೊಳೆ ರೋಗಗಳು ಪ್ರಮುಖವಾದವುಗಳು.

ಮಣ್ಣಿನಿಂದ ಬರುವ ರೋಗಗಳನ್ನು ರೋಗ ಬಂದ ನಂತರ ಹತೋಟಿ ಮಾಡುವುದಕ್ಕಿಂತ, ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಲು ಟ್ರೈ ಕೋಡರ್ಮಾ ಎಂಬ ಸೂಕ್ಷ್ಮಾಣು ಜೀವಿಗಳನ್ನು ಉಪಯೋಗಿಸಲಾಗುತ್ತಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಅಭಿವೃದ್ಧಿ ಪಡಿಸಿಕೊಂಡು ಬಳಸಬಹುದಾಗಿದೆ. ಟ್ರೆöÊಕೋಡರ್ಮಾ ವಿರಿಡೆ ಹಾಗು ಟ್ರೈಕೋಡರ್ಮಾ ಹಾರ್ಜಿಯಾನಮ್ ಎಂಬ ಎರಡು ಪ್ರಭೇದದ ಜೀವಿಗಳಿವೆ.

ಟ್ರೈಕೋಡರ್ಮಾ ಸೂಕ್ಷ್ಮಣು ಜೀವಿಯನ್ನು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರದೊಂದಿಗೆ ಬೆರೆಸಿ ಅಭಿವೃದ್ಧಿ ಪಡಿಸಿಕೊಳ್ಳಬೇಕು. ನೂರು ಕೆ.ಜಿ. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ತೆಗೆದುಕೊಂಡು ಅದಕ್ಕೆ ಕನಿಷ್ಟ ಒಂದು ಕೆ.ಜಿ. ಟ್ರೈಕೋಡರ್ಮಾ ಹಾರ್ಜಿಯಾನಮ್ ಸೂಕ್ಷ್ಮಾಣುಜೀವಿಯನ್ನು ಬೆರೆಸಬೇಕು. ಗೊಬ್ಬರದಲ್ಲಿ ಸುಮಾರು ಶೇ.೩೦-೪೦ ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಗೊಬ್ಬರದ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳದಂತೆ ಗೋಣಿಚೀಲದಿಂದ  ಅಥವಾ  ಕೃಷಿ ತ್ಯಾಜ್ಯವಸ್ತುಗಳಿಂದ  ಸರಿಯಾಗಿ ಮುಚ್ಚಬೇಕು.

ಈ ಮಿಶ್ರಣವನ್ನು ೨ ರಿಂದ ೩ ದಿನ ಇಡಬೇಕು. ಈ ಹಂತದಲ್ಲಿ ಟೈಕೋಡರ್ಮಾ ಸೂಕ್ಷ್ಮಾಣು ಜೀವಿಗಳು ಗೊಬ್ಬರದಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದಿರುತ್ತವೆ. ತೋಟಗಾರಿಕಾ ಅಥವಾ ಸಂಬಾರು ಬೆಳೆಗಳಲ್ಲಿ ೧೦ ವರ್ಷ ಮೇಲ್ಪಟ್ಟ ಗಿಡಗಳಿಗೆ ೧೦ ಕೆ.ಜಿ. ಕೊಟ್ಟಿಗೆ ಗೊಬ್ಬರ ಮತ್ತು ೧೦ ವರ್ಷದೊಳಿಗಿರುವ ಗಿಡಗಳಿಗೆ ೫ ಕೆ.ಜಿ. ಗೊಬ್ಬರವನ್ನು ಬುಡದ ಸುತ್ತಲೂ ಹಾಕಿ ಮಣ್ಣಿನೊಂದಿಗೆ ಬೆರೆಸಬೇಕು. ಉಳಿದ ಬೆಳೆಗಳಿಗೆ ಒಂದು ಎಕರೆಗೆ ೧೦ ಕೆ.ಜಿ.ಯಂತೆ ಬಳಸಬೇಕು.

ಮುನ್ನೆಚ್ಚರಿಕಾ ಕ್ರಮಗಳು

ಟ್ರೈಕೋಡರ್ಮಾ ಸೂಕ್ಷ್ಮಾಣು ಜೀವಿಗಳನ್ನು ಬಹುವಾರ್ಷಿಕ ಬೆಳೆಗಳಲ್ಲಿ ವರ್ಷಕ್ಕೆ ೨ ಸಲ ಮುಂಗಾರಿನ ಆರಂಭದಲ್ಲಿ, ಅಂದರೆ ಮೇ-ಜೂನ್ ತಿಂಗಳಿನಲ್ಲಿ ಮತ್ತು ಹಿಂಗಾರಿನಲ್ಲಿ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಉಪಯೋಗಿಸಬೇಕು. ಇತರ ಬೆಳೆಗಳಲ್ಲಿ ಗಿಡ ನಾಟಿ ಮಾಡುವ ಮೊದಲು ಬಳಸಬೇಕು.

೧. ಭೂಮಿಯಲ್ಲಿ ತೇವಾಂಶ ಅತೀ ಹೆಚ್ಚು ಅಥವಾ ಕಡಿಮೆಯಿದ್ದಾಗ  ಟ್ರೈಕೋಡರ್ಮಾ ಬಳಸುವುದು ಸೂಕ್ತವಲ್ಲ.

೨. ಟ್ರೈಕೋಡರ್ಮಾ ಹಾಕುವ  ೨೧  ದಿವಸಗಳ ಮುಂಚೆ ಹಾಗೂ ೨೧ ದಿವಸಗಳ ನಂತರ ಯಾವುದೆ ರಾಸಾಯನಿಕ ಶಿಲೀಂಧ್ರನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು.

೩. ಟ್ರೈಕೋಡರ್ಮಾ ಮಿಶ್ರ ಮಾಡಲು ಚೆನ್ನಾಗಿ ಕಳಿತ ಗೊಬ್ಬರವನ್ನು ಮಾತ್ರ ಬಳಕೆ ಮಾಡಬೇಕು.

ಇದರ ನಿರಂತರ ಬಳಕೆಯಿಂದ ಮಣ್ಣಿನಲ್ಲಿರುವ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದಾಗಿ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಇದರ ಪರಿಣಾಮವಾಗಿ ಗಿಡಗಳ ಬೆಳವಣಿಗೆ ಉತ್ತಮವಾಗಿದ್ದು ಫಸಲು ಸಹ ಹೆಚ್ಚಾಗುತ್ತದೆ.

೧. ಟ್ರೈಕೋಡರ್ಮಾವನ್ನು ರೋಗ ಬಂದಿರುವ ಗಿಡಗಳಿಗೆ ಬಳಸುವುದರಿಂದ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ರೋಗ ಬರುವ ಮೊದಲೇ ಮುಂಜಾಗ್ರತ ಕ್ರಮವಾಗಿ ಬಳಕೆ ಮಾಡುವ ಮೂಲಕ ರೋಗ ಬಾರದಂತೆ ತಡೆಯಬಹುದು.

೨. ಮಣ್ಣಿನಲ್ಲಿರುವ ಟ್ರೈಕೋಡರ್ಮಾದ  ಸಂಖ್ಯೆ ವೃದ್ಧಿಯಾಗಲು ಸುಮಾರು ೩ ರಿಂದ ೪ ವರ್ಷಗಳ ಸಮಯ ಬೇಕಾಗುತ್ತದೆ.

೩. ಟ್ರೈಕೋಡರ್ಮಾವನ್ನು ಮಣ್ಣಿನಲ್ಲಿ ಸೂಕ್ತ ತೇವಾಂಶವಿರುವಾಗ ಬಳಸುವುದು ಉತ್ತಮ. ಒಣಭೂಮಿಯಲ್ಲಿ ಅಥವಾ ಅತಿ ಹೆಚ್ಚು ತೇವಾಂಶ ಮಣ್ಣಿನಲ್ಲಿ ಟ್ರೈಕೋಡರ್ಮಾವನ್ನು ಬಳಸಬಾರದು.

೪.ಟ್ರೈಕೋಡರ್ಮಾ ಮತ್ತು ಇತರ ಉಪಯೋಗಿ ಜೀವಾಣುಗಳು ಮಣ್ಣಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರಬೇಕಾದರೆ ತೋಟಗಾರಿಕಾ ಹಾಗು ಸಂಬಾರು ಬೆಳೆಗಳಲ್ಲಿ ಪ್ರತಿ ಗಿಡಕ್ಕೆ ೧೦ ಕೆ.ಜಿ. ಕೊಟ್ಟಿಗೆಗೊಬ್ಬರ, ೫ ಕೆ.ಜಿ ಬೇವಿನ ಹಿಂಡಿ, ೨ ಕೆ.ಜಿ.ಯಂತೆ ಎರೆಹುಳು ಗೊಬ್ಬರ ಬಳಕೆ ಮಾಡಬೇಕು.

೫.ಟ್ರೈಕೋಡರ್ಮಾ ಮಿಶ್ರಣವನ್ನು ತಯಾರಿಸಿದ ನಂತರ ಸುಮಾರು ೬ ತಿಂಗಳವರೆಗೆ ಬಳಸಲು ಯೋಗ್ಯ ಆದರೆ ನೆರಳಿನಲ್ಲಿ ಶೇಖರಿಸಿಡಬೇಕು.

೬.ಟ್ರೈಕೋಡರ್ಮಾ ಮಿಶ್ರಣವನ್ನು ಮಣ್ಣಿನಲ್ಲಿ ಮಿಶ್ರಣ ಮಾಡುವಾಗ ಗಿಡದ ಬೇರುಗಳು ತುಂಡಾಗದಂತೆ ಎಚ್ಚರಿಕೆ ವಹಿಸಬೇಕು.

LEAVE A REPLY

Please enter your comment!
Please enter your name here