ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿವಿ ಪಾತ್ರ ಮುಖ್ಯ

0
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕ ರೀತಿ ಕಾರ್ಯಕ್ರಮ ಉದ್ಘಾಟಿಸಿದರು
  • Lab to Land-Land to Lab ಪರಿಕಲ್ಪನೆಯಲ್ಲಿ ಕೃಷಿ ವಿವಿ ಗಳು ಕೆಲಸ ಮಾಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಅ 18: ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿಶ್ವವಿದ್ಯಾಲಯಗಳ  ಪಾತ್ರ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ‌ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿ ಬಳಿಕ ದೇಶ ಆಹಾರ ಸ್ವಾವಲಂಬನೆಯನ್ನು ಸಾಧಿಸಿತು. ಅದಕ್ಕೂ ಮೊದಲು ಅವಲಂಬನೆ ಇತ್ತು. ಇತ್ತೀಚಿಗೆ ನಿಧನರಾದ ಕೃಷಿತಜ್ಞ ಸ್ವಾಮಿನಾಥನ್ ಅವರು ಈ ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು. ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು ಹೆಚ್ಚಾಗಬೇಕು ಎಂದರು.

ಖುಷ್ಕಿ ಭೂಮಿ ಅತಿ ಹೆಚ್ವು ಇರುವ ರಾಜ್ಯ ನಮ್ಮದು. ವಾತಾವರಣ ಬದಲಾವಣೆಯಿಂದ ರಾಜ್ಯ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ. ಈ ಕಾರಣಕ್ಕೇ ನಮ್ಮ ರೈತರಿಗೆ ಕೃಷಿ, ತಜ್ಞರು ಮತ್ತು ತಂತ್ರಜ್ಞರ ನೆರವು ಅತ್ಯಗತ್ಯ ಎಂದರು.

ಇದಕ್ಕಾಗಿಯೇ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು.  ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಕಡಿಮೆ ಮಳೆಯಲ್ಲಿ, ಕಡಿಮೆ ನೀರಲ್ಲಿ ಎಂಥಾ ಬೆಳೆ ಬೆಳೆಯಬಹುದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗದಂತೆ ಏನು ಮಾಡಬೇಕು ಎನ್ನುವ ಕುರಿತಂತೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆದು ರೈತರಿಗೆ ತಲುಪುವಂಥಾಗಬೇಕು ಎಂದರು.

ಪ್ರಯೋಗಾಲಯದಿಂದ ಕೃಷಿಭೂಮಿಗೆ

ಪ್ರಯೋಗಶಾಲೆಗಳಿಂದ ಕೃಷಿಭೂಮಿಗೆ ಏನು ತಲುಪಿದೆ, ಕೃಷಿಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ Lab to Land-Land to Lab ಪರಿಕಲ್ಪನೆಯಲ್ಲಿ ವೈಜ್ಞಾನಿಕ ಕೆಲಸಗಳನ್ನು ಕೃಷಿ ವಿವಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೃಷಿ ವಿವಿ ಗಳು ಅಭಿವೃದ್ಧಿ ಪಡಿಸಿರುವ ಹೊಸ ತಳಿಗಳು ರೈತರಿಗೆ ತಲುಪಿವೆಯಾ ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಹೊಸ ತಳಿಗಳು ಅಭಿವೃದ್ಧಿ ಮಾಡಿ ಏನು ಪ್ರಯೋಜನ ಎಂದರು ?

ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಕೃಷಿ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಸ್ತರಣಾ ಸಂಸ್ಥೆ, ಕೃಷಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರೂ, ಕಂದಾಯ ಸಚಿವರೂ ಆದ ಕೃಷ್ಣಬೈರೇಗೌಡ ಅವರು ವಹಿಸಿದ್ದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಶರತ್ ಬಚ್ಚೇಗೌಡ, ಕೃಷಿ ವಿವಿ ಕುಲಪತಿಗಳಾದ ಡಾ.ಎಸ್.ವಿ.ಸುರೇಶ್ ಸೇರಿ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here