ಮಣ್ಣಿನ ಸೂಕ್ಷ್ಮಜೀವಿಗಳಿಗೆ ಹರ್ಬಲ್‌ ಟೀ ಕುಡಿಸಿ !

0
ಲೇಖಕರು: ಸಾಯಿಲ್‌ ವಾಸು

ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ ಕೃಷಿಭೂಮಿಗೆ ಹಾಗೆಯೇ ಬಂದು ಠಿಕಾಣಿ ಹಾಕುತ್ತವೆ.  ಗೊಬ್ಬರ – ನೀರು ಕೊಡದಿದ್ದರೂ ಪರವಾಗಿಲ್ಲ – ತನಗೇನಾಗಲ್ಲ ಎಂಬಂತೆ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ.   ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ.   ಇವನ್ನು ನಿರ್ನಾಮ ಮಾಡಲು ರೈತರು ಕಾರ್ಕೋಟಕ ವಿಷವಾಗಿರುವ ಕಳೆನಾಶಕಗಳನ್ನು ಬಳಸುತ್ತಾರೆ. ಕಳೆಗಳು ಕಣ್ಮರೆಯಾಗುತ್ತವೋ – ಇಲ್ಲವೋ ಗೊತ್ತಿಲ್ಲ.  ಆದರೆ ಕಳೆನಾಶಕದ ದುಷ್ಪರಿಣಾಮ ಮಣ್ಣಲ್ಲಿನ ಉಪಯುಕ್ತ ಜೀವಾಣುಗಳ ಮೇಲಂತೂ ನಿರಂತರವಾಗಿ ಆಗುತ್ತಿದೆ.

ಕಳೆಗಿಡಗಳು  ಮಣ್ಣಿನ ಆರೋಗ್ಯದ ಸ್ಥಿತಿ – ಗತಿಗಳನ್ನು ತಿಳಿಸುವ ಸೂಚಕಗಳೆಂದು ಸಹಜ ಕೃಷಿಕರು ನಂಬುತ್ತಾರೆ.  ನಮ್ಮಲ್ಲಿನ ಮಣ್ಣು ಆರೋಗ್ಯ ಮತ್ತು ಫಲವತ್ತತೆಯಿಂದ ಕೂಡಿದೆಯೆಂಬುದನ್ನೂ ಸಹ ಈ ಕಳೆಗಿಡಗಳು ತೋರಿಸುತ್ತವೆ. ಅಂದರೆ, ನಮ್ಮ ಹೊಲ – ತೋಟ – ಗದ್ದೆ – ತೋಪುಗಳಲ್ಲಿನ ಮಣ್ಣುಗಳಲ್ಲಿ ಏನಾಗುತ್ತಿದೆಯೆಂಬುದನ್ನು ನಮಗೆ ತಿಳಿಸುವ ಸಲುವಾಗಿಯೇ ಈ ಬಗೆಯ ಕಳೆಗಿಡಗಳು ಹುಟ್ಟುತ್ತವೆಯಂತೆ.  ಆದ್ದರಿಂದ ಕಳೆಗಿಡಗಳನ್ನು ನೋಡಿದ ತಕ್ಷಣ ಅದನ್ನು ಬುಡಸಮೇತ ಕಿತ್ತೆಸೆಯುವತ್ತ ಚಿಂತಿಸದಿರಿ.

ರೈತರಿಗೆ ಹರ್ಬಲ್‌ ಟೀ ತಯಾರಿಕೆ ಬಗ್ಗೆ ತರಬೇತಿ ನೀಡುತ್ತಿರುವುದು

ಈ ಮಣ್ಣ ಮೇಲಿನ ಸಕಲ ಜೀವರಾಶಿಗೆ ಅನಗತ್ಯವಾದ ಯಾವುದನ್ನೂ ನಮ್ಮ ನಿಸರ್ಗ ಸೃಷ್ಟಿಸಿಲ್ಲ.  ಇದನ್ನು ನಾವು ಒಪ್ಪುವುದಾದರೆ, ಈ  ಬಗೆಯ ಗಿಡಗಳೂ ಸಹ ನಮಗೆ ಉಪಯುಕ್ತವೇ ಎಂಬುದನ್ನೂ ಒಪ್ಪಬೇಕಲ್ಲವೆ.  ಹಾಗೆಯೇ ಈ ಗಿಡಗಳೂ ಸಹ ಮಣ್ಣಿಂದ ಪೋಷಕಾಂಶಗಳನ್ನು ಹೀರಿಯೇ ಬೆಳೆದಿವೆಯಲ್ಲವೇ.   ಈ ಗಿಡಗಳ ಪ್ರತಿಯೊಂದು ಭಾಗದಲ್ಲೂ ಪೋಷಕಾಂಶಗಳು ಅಡಗಿರುವಾಗ, ಈ ಗಿಡಗಳನ್ನು ಕಿತ್ತು ಸುಡುವುದಾಗಲೀ – ಇದನ್ನು ನಿರ್ನಾಮ ಮಾಡುವ ಕಳೆನಾಶಕಗಳನ್ನು ಬಳಸುವುದಾಗಲೀ ಮಾಡಿದಾಗ, ಪೋಷಕಾಂಶಗಳೂ ಸಹ ನಾಶವಾಗುತ್ತವೆ.

ಕಳೆಗಿಡಗಳನ್ನು ಉಪಯುಕ್ತವಾಗಿ ಬಳಸಲು ಹಲವು ವಿಧಾನಗಳಿವೆ.  ಅವುಗಳಲ್ಲಿ ಒಂದು ಕಳೆಗಿಡಗಳ ಚಹಾ ಅಂದರೆ ಕಳೆ ಚಹಾ. ಇದೊಂದು ದ್ರವರೂಪೀ ಗೊಬ್ಬರ.

  1. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಕಳೆಗಿಡಗಳನ್ನು – ಅದರೆ ಎಲೆ ಮತ್ತು ಕಾಂಡ ಭಾಗವನ್ನು ಮಾತ್ರ ಕತ್ತರಿಸಿ.
  2. ಅದನ್ನು ಇನ್ನಷ್ಟು ಸಣ್ಣಗೆ ಕತ್ತರಿಸಿ, ಒಂದು ಗೋಣೀಚೀಲದಲ್ಲಿ ಹಾಕಿ.
  3. ಕಳೆಗಿಡಗಳಿಂದ ತುಂಬಿದ ಗೋಣೀಚೀಲವನ್ನು ಬಿಗಿಯಾಗಿ ಕಟ್ಟಿ , 200 ಲೀಟರ್ ಸಾಮರ್ಥ್ಯದ ಡ್ರಂ ಒಂದರಲ್ಲಿ ಇಡಿ. ಆ ಡ್ರಂ ನ ಮುಕ್ಕಾಲು ಭಾಗ ನೀರು ತುಂಬಿಸಿ.
  4. ಗೋಣೀಚೀಲದ ಮೇಲೆ ಭಾರವಾದ ಕಲ್ಲೊಂದನ್ನು ಇಡಿ. ಏಕೆಂದರೆ ನೀರಲ್ಲಿರುವ ಗೋಣೀಚೀಲ ಮೇಲಕ್ಕೆ ತೇಲತೊಡಗುತ್ತದೆ.  ಅದನ್ನು ತಪ್ಪಿಸಲು ಭಾರವಾದ ಕಲ್ಲೊಂದನ್ನು ಇಡಬೇಕು.
  5. ಡ್ರಂ ಹಾಗೆಯೇ ತೆರೆದಿರಲಿ.

  1. ಪ್ರತಿದಿನಾ ಬೆಳಿಗ್ಗೆ ಮತ್ತು ಸಂಜೆ ಡ್ರಂನಲ್ಲಿನ ಕಳೆಗಿಡಗಳನ್ನು ತುಂಬಿರುವ ಗೋಣೀಚೀಲವನ್ನು ಕೋಲೊಂದರಿಂದ ಚುಚ್ಚಿ.  ಹೀಗೆ ಮಾಡುವಾಗ, ಗೋಣೀಚೀಲದೊಳಗಿರುವ ಕಳೆಗಿಡಗಳಲ್ಲಿನ ಸಾರ ನೀರಲ್ಲಿ ನಿಧಾನವಾಗಿ ಬೆರೆಯುತ್ತದೆ.  ನೀರಿನ ಬಣ್ನವೂ ಕ್ರಮೇಣ ಕಪ್ಪಾಗುತ್ತದೆ.
  2. 15 ದಿನಗಳ ನಂತರ ಈ ನೀರನ್ನು ಎಲ್ಲಿಂದ ಕಳೆಗಿಡಗಳನ್ನು ಸಂಗ್ರಹಿಸಿದೆವೋ, ಅಲ್ಲಿನ ಮಣ್ಣ ಮೇಲೆ ಹಾಕಿ. ಮಣ್ಣು ನೇರಬಿಸಿಲಿಗೆ ತಾಗದಂತೆ ಹೊದಿಕೆ ಮಾಡಿ.
  3. ಕಳೆಗಿಡಗಳಲ್ಲಿನ ಹಲವು ಬಗೆಯ ಪೋಷಕಾಂಶಗಳು ಮಣ್ಣಿಗೆ ಸೇರಿ ಮಣ್ಣಿನ ತಾಕತ್ತು ಹೆಚ್ಚುತ್ತದೆ. ಮಣ್ಣಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.  ಆ ಮಣ್ಣಲ್ಲಿ ಬೆಳೆಯುವ ಗಿಡಗಳು ಆರೋಗ್ಯವಾಗಿರುತ್ತವೆ.

LEAVE A REPLY

Please enter your comment!
Please enter your name here