ಕಾಂಪೋಸ್ಟ್ : ಮಣ್ಣುಜೀವಿಗಳಿಗೆ ಮೃಷ್ಟಾನ್ನ – ಗಿಡಗಳಿಗೆ ಪರಮಾನ್ನ

0
ಲೇಖಕರು: ಸಾಯಿಲ್‌ ವಾಸು

ಕಾಂಪೋಸ್ಟ್ ಗೊಬ್ಬರದಲ್ಲಿರುವ ಸಾವಯವ ಅಂಶಗಳು ಮಣ್ಣಿನ ಮೇಲೆ ಅದ್ಭುತ ಪರಿಣಾಮಗಳನ್ನು ಬೀರುತ್ತವೆ. ಮಣ್ಣೊಳಗಿನ ಜೀವಾಣುಗಳಾದ ಎರೆಹುಳು ಹಾಗೂ ಇನ್ನಿತರ ಜೀವಜಂತುಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರದ ಮೂಲವೇ ಕಾಂಪೋಸ್ಟ್. ಹಾಗೆಯೇ, ಗಿಡಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಪೂರೈಸುವುದೂ ಸಹ ಕಾಂಪೋಸ್ಟ್.
ಕಾಂಪೋಸ್ಟ್ ನಿಂದ ಅನೇಕಾನೇಕ ಅನುಕೂಲಗಳಿವೆ. ಅದರಿಂದ 

  • ಮಣ್ಣ ರಚನೆಯ ಸುಧಾರಣೆ
  • ಮಣ್ಣಲ್ಲಿ ರೂಪುಗೊಳ್ಳುವ ಸಣ್ಣಸಣ್ಣ ರಂಧ್ರಗಳು
  • ಸಮತೋಲನೆಗೆ ಬರುವ ಮಣ್ಣಿನ ರಸಸಾರ (soil pH)
  • ಕ್ಷಾರೀಯತೆ ಅಥವಾ ಆಮ್ಲೀಯತೆಯಿಂದ ಸಹಜ ಸ್ಥಿತಿಗೆ ಬರುವ ಮಣ್ಣು
  • ದಟ್ಟವಾದ ಬಣ್ಣಕ್ಕೆ ತಿರುಗುವ ಮಣ್ಣು
  • ಅಪಾಯಕಾರಿ ರಾಸಾಯನಿಕಗಳಿಂದ ಮಣ್ಣಿನ ರಕ್ಷಣೆ
  • ಬೇರುಗಳ ಬೆಳವಣಿಗೆಗೆ ಉತ್ತೇಜನ

Fred Magdoff, professor of soil science at the University of Vermont and chair of USDA’s regional Sustainable Agriculture Research and Education program ಇವರ ಪ್ರಕಾರ ಸಾವಯವ ವಸ್ತುಗಳು ಮೂರು ಬಗೆಯವು.
ಅ) ಸಜೀವಿಗಳಿರುವ ಸಾವಯವ ವಸ್ತು :
ಕೆಲವು ಬಗೆಯ ಕ್ರಿಮಿಕೀಟಗಳು – ದುಂಡಾಣು ಜಂತುಗಳು – ಬ್ಯಾಕ್ಟೀರಿಯಾ – ಫಂಗೀ – ಎರೆಹುಳುಗಳು ಹಾಗೂ ಗಿಡದ ಬೇರುಗಳನ್ನು ಈ ವರ್ಗಕ್ಕೆ ಸೇರಿಸಬಹುದು. ಇಡಿಯ ಸಾವಯವ ಗೊಬ್ಬರದಲ್ಲಿ ಸಜೀವಿ ಸಾವಯವ ವಸ್ತುಗಳ ಪ್ರಮಾಣ ಸುಮಾರು ಶೇಕಡಾ 10 ರಿಂದ 20 ರಷ್ಟಿರುತ್ತದೆ.

ಮಣ್ಣಿನ ರಚನೆಯಲ್ಲಿ ಸಜೀವಿ ಸಾವಯವ ವಸ್ತುಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಬ್ಯಾಕ್ಟೀರಿಯಾಗಳು ಮಣ್ಣಲ್ಲಿ ಅಂಟುಪದರವನ್ನು ಸೃಷ್ಟಿಸುತ್ತಿವೆ. ಈ ಅಂಟುಪದರ ಮಣ್ಣಲ್ಲಿನ ಮರಳು – ಜೇಡಿ – ಗೋಡು ಕಣಗಳನ್ನು ಹಾಗೂ ಸಾವಯವ ವಸ್ತುವನ್ನು ಪರಸ್ಪರ ಕೂಡಿಸುತ್ತದೆ.

ಮೈಕೋರೀಜ್ಙಾ ಫಂಗೀ ಮೆತ್ತಿಕೊಳ್ಳುವ (sticky) ವಸ್ತುವನ್ನು ಉತ್ಪಾದಿಸುತ್ತದೆ. ಇವು ಅಂಟುಕೊಂಡಿರುವ ಮಣ್ಣಿನ ವಿವಿಧ ಕಣಗಳು ಒಡೆಯದಂತೆ – ಬೇರ್ಪಡದಂತೆ ಮಾಡಲು, ಕಣಗಳನ್ನು ಒತ್ತಾಗಿರುವಂತೆ ಮಾಡುತ್ತವೆ. ಇನ್ನು ದುಂಡಾಣುಜಂತುಗಳು ಮಣ್ಣಲ್ಲಿ ರಂಧ್ರಗಳು ಮೂಡಲು ಸಹಕರಿಸುತ್ತವೆ. ಈ ರಂಧ್ರಗಳ ಮೂಲಕವೇ ಮಣ್ಣೊಳಗೆ ಗಾಳಿಯಾಡುತ್ತದೆ – ನೀರು ಹರಿಯುತ್ತದೆ. ಇವೆಲ್ಲದರ ಒಟ್ಟು ಪರಿಣಾಮವೇ ಉತ್ತಮವಾಗಿ ರೂಪುಗೊಳ್ಳುವ ಮಣ್ಣಿನ ರಚನೆ.

ರಾಸಾಯನಿಕ ಗೊಬ್ಬರಗಳು, ಕಾರ್ಕೋಟಕ ಕೀಟನಾಶಕಗಳು ಹಾಗೂ ಕಳೆನಾಶಕಗಳ ಬಳಕೆಯಿಂದ ಮಣ್ಣಲ್ಲಿ ಮಾರಕ ಗುಣವಿರುವ ಆಮ್ಲೀಯ ಅಂಶ ಸೃಷ್ಟಿಯಾಗುತ್ತದೆ. ಇವು ಮಣ್ಣುಜೀವಿಗಳಿರುವ ಪ್ರಾಕೃತಿಕ ವಲಯದಲ್ಲಿನ ಸಮತೋಲನೆಯನ್ನು ಅಸ್ತವ್ಯಸ್ಥಗೊಳಿಸುತ್ತದೆ. ಈ ಕಾರಣಗಳಿಂದ ಮಣ್ಣು ಜೀವಿಗಳು ನಿರ್ನಾಮಗೊಳ್ಳುತ್ತವೆ.

ಆ) ನಿರ್ಜೀವಿ ಸಾವಯವ ವಸ್ತು
ಸಾವಯವ ಗೊಬ್ಬರದಲ್ಲಿ ನಿರ್ಜೀವಿ ಸಾವಯವ ವಸ್ತುಗಳ ಪ್ರಮಾಣ ಶೇಕಡಾ 10 ರಿಂ 20ರಷ್ಟು. ಇವೇ ಸುಲಭವಾಗಿ ಕೊಳೆಯುವ ಸಾವಯವ ವಸ್ತುಗಳು. ಪರಿಪೂರ್ಣವಾಗಿ ಕೊಳೆಯದ ಸಸ್ಯಮೂಲಗಳನ್ನು ಅಂದರೆ ಹುಲ್ಲು, ಕಡ್ಡಿ, ತಾಜಾ ಸಗಣಿ ಇತ್ಯಾದಿಗಳನ್ನು ಈ ವರ್ಗಕ್ಕೆ ಸೇರಿಸಬಹುದು. ಸೂರ್ಯನ ಕಿರಣಗಳು ಮಣ್ಣಿಗೆ ತಾಕದಂತೆ ಮಾಡಲು ಮಣ್ಣಮೇಲೆ ಹುಲ್ಲು – ಕಸಕಡ್ಡಿಗಳನ್ನು ಹರಡಿ “ಮಣ್ಣು ಹೊದಿಕೆ” ಮಾಡುತ್ತೇವಲ್ಲವೇ. . . ಅರೆಬರೆ ಕೊಳೆತಿರುವ ಈ ಸಾವಯವ ವಸ್ತುಗಳನ್ನೇ ನಿರ್ಜೀವಿ ಸಾವಯವ ವಸ್ತುಗಳೆನ್ನಬಹುದು. ಉಪಯುಕ್ತ ಮಣ್ಣುಜೀವಾಣುಗಳು ಈ ನಿರ್ಜೀವಿ – ಅರೆಕೊಳೆತ ಸಾವಯವ ವಸ್ತುಗಳನ್ನೇ ಆಹಾರವಾಗಿ ಬಳಸುತ್ತವೆ ಹಾಗೂ ಗಿಡಗಳಿಗೂ ಸಹ ಪೋಷಕಾಂಶಗಳಾಗಿ ಒದಗಿಸುತ್ತವೆ. ಇವು ಚೆನ್ನಾಗಿ ಕೊಳೆತು – ಕಳಿತ ನಂತರದ ಹಂತವೇ ಕಾಂಪೋಸ್ಟ್ ಗೊಬ್ಬರ ಮತ್ತು ಹ್ಯೂಮಸ್.

ಇ) ಪರಿಪೂರ್ಣ ನಿರ್ಜೀವಿ ಸಾವಯವ ವಸ್ತು
ಸಾವಯವ ವಸ್ತುಗಳು ಪರಿಪೂರ್ಣವಾಗಿ ಕಳಿತಾಗ ಸಿಗುವುದೇ ಹ್ಯೂಮಸ್ ಆಂಶ. ಇದನ್ನೇ ಪರಿಪೂರ್ಣವಾದ ಕಾಂಪೋಸ್ಟ್ ಎನ್ನುತ್ತೇವೆ. ಹ್ಯೂಮಸ್ ಎಂದರೆ ” ಮಣ್ಣಿನ ಜೀವಶಕ್ತಿ” ಎನ್ನಬಹುದು. ಈ ಹ್ಯೂಮಸ್ ನ ಪ್ರಯೋಜನಗಳು:
– ಮಣ್ಣುಜೀವಾಣುಗಳಿಗೆ ಪೌಶ್ಟಿಕಯುಕ್ತ ಆಹಾರ. ಇದರಿಂದ ಮಣ್ಣುಜೀವಾಣುಗಳ ಆರೋಗ್ಯ ಸುಧಾರಣೆ
– ಗಿಡದ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳಿರುವ ಖಜಾನೆ
– ಗಿಡದ ಬೇರುಗಳ ಮೂಲಕ ಪೋಷಕಾಂಶಗಳ ಪೂರೈಕೆ
– ಹ್ಯೂಮಸ್ ಮಣ್ಣಲ್ಲಿ ತೇವಾಂಶ ಸದಾಕಾಲ ಇರುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ಬರಗಾಲವನ್ನು ತಡೆದುಕೊಳ್ಳುವ ಶಕ್ತಿ ಗಿಡಗಳಿಗೆ ಬರುತ್ತದೆ

LEAVE A REPLY

Please enter your comment!
Please enter your name here