ಕೃಷಿ ಉತ್ಪನ್ನಗಳ ಸಾಗಣೆಗೆ ಅಡ್ಡಿಯಿಲ್ಲ

ಕಾರ್ಯದರ್ಶಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ‌ ಅಧಿಕಾರಿಗಳ ಜೊತೆ ಸೇರಿ ರೈತರ ಬೆಳೆಗಳು, ಪರಿಕರಗಳ ಮಾರಾಟ ಕುರಿತು ಸಭೆ ನಡೆಸಿ ಚರ್ಚಿಸಿದ್ದೇವೆ. ಬೆಂಗಳೂರಿನಲ್ಲಿ ತರಕಾರಿ ಹಾಗೂ ದಿನಸಿ ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ.ಬೆಂಗಳೂರಿನ ಸುತ್ತಮುತ್ತಲಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,ರಾಮನಗರ ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಣ್ಣುಹಂಪಲುಗಳನ್ನು ಬೆಳೆದ ರೈತರು ಎಪಿಎಂಪಿ ಸಭಾಂಗಣದಲ್ಲಿ ತಮ್ಮ ಬೆಳೆಗಳನ್ನು ತಂದು ತಾಲೂಕು ಕೃಷಿ ಉಪನಿರ್ದೇಶಕರ ಸಹಯೋಗದೊಂದಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿ ಅಲ್ಲಿಂದ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚಿಸಲಾಗಿದೆ

0

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಸರಬರಾಜು,‌ಸಾಗಾಣಿಕೆ ‌ಮಾರಾಟ ಸಂಬಂಧ ಕೈಗೊಳ್ಳಲಾದ ಕ್ರಮಗಳ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಹಕಾರ ಇಲಾಖೆಯ ಸಚಿವ ಎಸ್.ಟಿ.ಸೋಮಶೇಖರ್ ಕೃಷಿ ಇಲಾಖಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಪರಿಕರಗಳನ್ನು ಸಕಾಲದಲ್ಲಿ ರೈತರಿಗೆ ದೊರೆಯುವಂತೆ ಮಾಡಲು ಹಾಗೂ ವಿವಿಧ ಅಗತ್ಯ ವಸ್ತುಗಳ ಸಮರ್ಪಕ ವ್ಯವಸ್ಥೆಗಾಗಿ ಬೆಳಿಗ್ಗೆ ,8 ಗಂಟೆಯಿಂದ‌ ರಾತ್ರಿ‌ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಕೃಷಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ “ಅಗ್ರಿ ವಾರ್ ರೂಮ್” ತೆರೆದ ಬಗ್ಗೆ, ರೈತರ ಕೃಷಿ ಪರಿಕರಗಳ‌ ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಹಾಗೂ  ಮಳಿಗೆಗಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ “ಗ್ರೀನ್ ಪಾಸ್” ಗಳನ್ನು ಒದಗಿಸುವಂತೆ ಜಿಲ್ಲಾ‌ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಲಾಯಿತು.

ಕೆಲವೊಂದು ಕಡೆ ಹಿಂಗಾರು/ಬೇಸಿಗೆ ಹಂಗಾಮಿನಲ್ಲಿ ಬೆಳೆದ ಫಸಲುಗಳ ಕೊಯ್ಲಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಸಾಗಣೆಗೆ ತೊಂದರೆಯಾಗುತ್ತಿರುವುದನ್ನು  ನಿವಾರಿಸಲು ಜಿಲ್ಲಾ ಜಂಟಿ ನಿರ್ದೇಶಕರುಗಳಿಗೆ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಲು ಹಾಗೂ ಅಂತರ್‌ರಾಜ್ಯ ಸಾಗಾಣಿಕೆ ವ್ಯವಸ್ಥೆಯಲ್ಲಿ ಬರುವ  ತೊಂದರೆಗಳನ್ನು ನಿವಾರಿಸಬೇಕೆಂದು ಸಚಿವರು ಸಭೆಯಲ್ಲಿ ಸೂಚಿಸಿದರು.

ಕೇರಳ ಹೊರತುಪಡಿಸಿ ಎಲ್ಲಾ ಅಂತರ್ ರಾಜ್ಯ ಗಡಿಗಳಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.‌ ರಾಜ್ಯದಲ್ಲಿ 122ಖಾಸಗಿ, 6 ಎಪಿಎಂಸಿ,‌8 ಕಾಪೆಕ್ ಒಡೆತನದ ಸೇರಿದಂತೆ ಒಟ್ಟು  136 ಶಿಥಿಲೀಕರಣ ಘಟಕಗಳಿದ್ದು, 4,40,883 ಮೆಟ್ರಿಕ್ ಟನ್‌ ದಾಸ್ತಾನು ಮಾಡುವ ಸಾಮರ್ಥ್ಯವಿರುತ್ತದೆ.

ಕೆಲವೊಂದು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಶಿಥಿಲೀಕರಣ ಘಟಕಗಳಲ್ಲಿ ಶೇಖರಣೆ ಮಾಡಲು ಕಾಪೆಕ್ (ಕರ್ನಾಟಕ‌ ಸ್ಟೇಟ್ ಅಗ್ರಿಕಲ್ಚರಲ್‌ ಪ್ರಡ್ಯೂಸ್ ,ಪ್ರೊಸೆಸಿಂಗ್ ಎಂಡ್ ಎಕ್ಸಪೋರ್ಟ್ ಕಾರ್ಪೋರೇಷನ್)ಇದರ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಹಾಪ್ ಕಾಮ್ಸ್ ಮುಖಾಂತರ ಎಲ್ಲಾ ಜಿಲ್ಲೆಗಳಿಗೆ ಹೂವು, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

 ಸಭೆ ಬಳಿಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ,ಸಹಕಾರ ಸಚಿವರು ಮತ್ತು ತಾವು ಹಾಗೂ ಕಾರ್ಯದರ್ಶಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ‌ ಅಧಿಕಾರಿಗಳ ಜೊತೆ ಸೇರಿ ರೈತರ ಬೆಳೆಗಳು, ಪರಿಕರಗಳ ಮಾರಾಟ ಕುರಿತು ಸಭೆ ನಡೆಸಿ ಚರ್ಚಿಸಿದ್ದೇವೆ. ಬೆಂಗಳೂರಿನಲ್ಲಿ ತರಕಾರಿ ಹಾಗೂ ದಿನಸಿ ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ.ಬೆಂಗಳೂರಿನ ಸುತ್ತಮುತ್ತಲಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,ರಾಮನಗರ ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಣ್ಣುಹಂಪಲುಗಳನ್ನು ಬೆಳೆದ ರೈತರು ಎಪಿಎಂಪಿ ಸಭಾಂಗಣದಲ್ಲಿ ತಮ್ಮ ಬೆಳೆಗಳನ್ನು ತಂದು ತಾಲೂಕು ಕೃಷಿ ಉಪನಿರ್ದೇಶಕರ ಸಹಯೋಗದೊಂದಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿ ಅಲ್ಲಿಂದ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದರು.

ಕೃಷಿಕರಿಗೆ ಅನುಕೂಲ ಕಲ್ಪಿಸಲು ಕೃಷಿ ಆಯುಕ್ತರ ಕಚೇರಿಯಲ್ಲಿ ಅಗ್ರಿವಾರ್ ರೂಮ್ ತೆರೆಯಲಾಗಿದ್ದು,  ಇದು ದಿನದ 12ತಾಸು ಕೆಲಸ ನಿರ್ವಹಿಸಲಿದೆ. ಒಂದುವೇಳೆ  ರೈತರು ಬೆಳೆದ ಬೆಳೆಗಳ ದಾಸ್ತಾನು, ಮಾರಾಟ‌ ಸರಬರಾಜಿಗೆ ತೊಂದರೆಯುಂಟಾದಲ್ಲಿ‌ 080-22212818 ಹಾಗೂ 080-22210237 ಈ ಸಹಾಯವಾಣಿ ಸಂಖ್ಯೆಗೆ ಕರೆಮಾಡಬಹುದಾಗಿದೆ.ಈ ಸಾಹಯವಾಣಿ ಕೇವಲ‌ ಕೃಷಿ ಇಲಾಖೆಯಷ್ಟೇ ಅಲ್ಲ ತೋಟಗಾರಿಕೆ, ಸಹಕಾರ ಇಲಾಖೆಯ ದೂರುಗಳಿಗೂ ಸಹಾಯವಾಣಿಯಾಗಿದೆ ಎಂದು ಮಾಹಿತಿ ನೀಡಿದರು.

ಬೇರೆಕಡೆಯಿಂದ ಗೊಬ್ಬರ, ಬೀಜ,ಕ್ರಿಮಿನಾಶಕ ತರಲು ಮಾರಾಟ ಮಾಡಲು ಕೃಷಿಗೆ ಪೂರಕವಾಗಿ ಜೇಬಿನಲ್ಲಿಡಲು ಚಿಕ್ಕ ಪಾಸ್ ಹಾಗೂ ವಾಹನಗಳಿಗೆ ಅಂಟಿಸಲು ಗ್ರೀನ್ ಪಾಸ್(ಹಸಿರು ಪಾಸ್) ವಿತರಿಸಲಾಗುತ್ತಿದ್ದು, ಪಾಸ್‌ಗಳನ್ನು ತಾಲೂಕು ಎಡಿಗಳ ಮೂಲಕ (ತಾಲೂಕು ಕೃಷಿ‌ಸಹಾಯಕ ನಿರ್ದೇಶಕರು) ಪಡೆಯಬಹುದಾಗಿದೆ ಎಂದು ವಿವರಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರೈತರ ಬಹುತೇಕ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಏಪ್ರಿಲ್ 14ರವರೆಗೆ ಮನೆಯಿಂದ ತುರ್ತು ಕೆಲಸಗಳು ಹೊರತುಪಡಿಸಿ ಹೊರಗೆ ಬರುವುದು ಒಳ್ಳೆಯದಲ್ಲ. ರಾಜ್ಯದಲ್ಲಿ ತರಕಾರಿಗಾಗಲೀ ದಿನಸಿಗಾಗಲಿ ಕೊರತೆಯಿಲ್ಲ.ಸಾಕಷ್ಟು ದಾಸ್ತಾನು ಇದೆ.ಎಪಿಎಂಸಿಗೆ ಬರುವ ವಾಹನಗಳಿಗೆ ಯಾವುದೇ ಷರತ್ತು ಇಲ್ಲ. ಇಲಾಖೆಗಳ ಪಾಸ್ ಪಡೆದು ಎಪಿಎಂಸಿಯಲ್ಲಿ ಫಸಲುಗಳನ್ನು ದಾಸ್ತಾನು ಸಾಗಾಣಿಕೆ ಮಾಡಬಹುದು.  ರಾಜ್ಯದ ಜನತೆ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದು ಮನವಿ ಮಾಡಿದರು

LEAVE A REPLY

Please enter your comment!
Please enter your name here