ಮುತ್ತುಗದ ಮರ ಮುಂಗಾರು ಹಿಂಗಾರು ಮಳೆ ಭವಿಷ್ಯ ಹೇಳುತ್ತದೆಯೇ ?

0

ಪ್ರಕೃತಿಯ ವಿದ್ಯಮಾನಗಳನ್ನು ಅರಿಯಲು ಭಾರತದ ಜನಪದರು ಸಾವಿರಾರು ವರ್ಷಗಳಿಂದಲೂ ಪ್ರಕೃತಿಯೇ ನೀಡುವ ಸೂಚನೆಗಳನ್ನು ಅರಿಯುತ್ತಿದ್ದರು. ಅವರು ವೀಕ್ಷಣೆ – ವೀಶ್ಲೇಷಣೆಯಿಂದ ಗಳಿಸಿದ ಜ್ಞಾನ ದಾಖಲೀಕರಣ ಆಗದ ಕಾರಣದಿಂದ ಅನೇಕ ಉಪಯುಕ್ತ ಮಾಹಿತಿ ನಮಗೆ ದಾಟಿಲ್ಲ. ಕೆಲವು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಡಿ ಉಳಿದುಕೊಂಡಿವೆ. ಅಂಥವುಗಳಲ್ಲಿ ಮಳೆ ಕುರಿತ ಕಾಲಜ್ಞಾನವೂ ಸೇರಿದೆ.

ಭಾರತ ಉಪಖಂಡದ ಜೀವನಾಡಿ ಮುಂಗಾರು ಮಳೆ. ಇದು ಚೆನ್ನಾಗಿದ್ದರೆ ಅನ್ನದಾತರಾದ ರೈತರು, ಇತರ ಜನಮನ ಎಲ್ಲರೂ ನೆಮ್ಮದಿಯಾಗಿರುತ್ತಾರೆ. ಆದ್ದರಿಂದಲೇ ಮಳೆಬೆಳೆ ಹೇಗೆ ಅಗಬಹುದು ಎಂದು ಅಂದಿನ ಹಿರಿಯರು ಪ್ರಾಕೃತಿಕ ಸೂಚನೆಗಳಿಂದಲೇ ಅರಿಯುತ್ತಿದ್ದರು. ಇವುಗಳು ಹವಾಮಾನ ವಿಜ್ಞಾನಕ್ಕೂ ಹತ್ತಿರ ಇರುವುದನ್ನು ಕಾಣಬಹುದು. ಇದರ ಹೊರತಾಗಿಯೂ ಇವರ ಕಾಲಜ್ಞಾನವು ಕೆಲವೊಮ್ಮೆ ಪ್ರಕೃತಿಯಲ್ಲಿ ಆಗುವ ಧಿಢೀರ್‌ ವಿದ್ಯಮಾನಗಳಿಂದಲೂ ಬದಲಾಗುವ ಸಾಧ್ಯತೆಯೂ ಇರುತ್ತದೆ ಎಂಬ ಮಾತನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಲು ಇವರ ಮಳೆ ಕುರಿತ ಕಾಲಜ್ಞಾನ ಸಹಾಯಕವಾಗಿತ್ತು ಎಂಬುದನ್ನಂತೂ ನಿರಾಕರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ:ನೇರಳೆಹಣ್ಣು ಸಮೃದ್ಧತೆ ಬರಗಾಲ ಮುನ್ಸೂಚನೆಯೇ ?

ಪ್ರಕೃತಿಯೇ ಒಂದು ತೆರೆದ ಪುಸ್ತಕ ಎಂಬ ನಂಬಿಕೆ ನಮ್ಮ ಗ್ರಾಮೀಣ ಭಾಗದಲ್ಲಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ಮುತ್ತುಗದ ಮರ’ (Flame of the Forest) ಈ ಮರವು ಕೇವಲ ಸೌಂದರ್ಯದ ಸಂಕೇತವಲ್ಲ, ಬದಲಿಗೆ ರೈತನ ಪಾಲಿನ ಹವಾಮಾನ ಭವಿಷ್ಯಕಾರ ಕೂಡ ಹೌದು.

ಮುದುಕದ ಮರ: ಜಗತ್ತಿನ ಹಿರಿಯ ಮರ

ನಮ್ಮ ರೈತಾಪಿ ವರ್ಗದಲ್ಲಿ ಮುತ್ತುಗದ ಮರವು ಜಗತ್ತಿನಲ್ಲಿರುವ ಮರ-ಮುಟ್ಟುಗಳಲ್ಲಿ ಅತ್ಯಂತ ಹಿರಿಯದು ಎಂಬ ಗಾಢವಾದ ನಂಬಿಕೆಯಿದೆ. ಈ ಕಾರಣಕ್ಕಾಗಿಯೇ ಗ್ರಾಮೀಣ ಭಾಗದಲ್ಲಿ ಇದನ್ನು ‘ಮುದುಕದ ಮರ’ ಎಂದೂ ಕರೆಯುತ್ತಾರೆ. ಅನುಭವಸ್ಥ ಮುದುಕರು ಜೀವನದ ಏರಿಳಿತಗಳನ್ನು ಮುನ್ಸೂಚಿಸುವಂತೆ, ಈ ಮರವು ಕೂಡ ಆ ವರ್ಷದ ಮಳೆಯ ಮುನ್ಸೂಚನೆಯನ್ನು ತನ್ನ ಪ್ರಕ್ರಿಯೆಗಳ ಮೂಲಕ ಸಾರುತ್ತದೆ.

ಇದನ್ನೂ ಓದಿ:ಬರದ ಭೀತಿ; ಐಓಡಿ ಒಂದೇ ಆಶಾಕಿರಣ

ಹೂವು ಮತ್ತು ಕಾಯಿಗಳ ಮೂಲಕ ಮಳೆಯ ಲೆಕ್ಕಾಚಾರ

ಮುತ್ತುಗದ ಮರದ ಹೂವನ್ನು ಇಂಗ್ಲಿಷ್‌ನಲ್ಲಿ ‘ಫ್ಲೇಮ್ ಆಫ್ ದಿ ಫಾರೆಸ್ಟ್’ (Flame of the Forest) ಎಂದು ಕರೆಯಲಾಗುತ್ತದೆ.ಸಸ್ಯಶಾಸ್ತ್ರೀಯ ಹೆಸರು “ಬ್ಯೂಟಿಯಾ ಮೊನೊಸ್ಪೆರ್ಮಾ”(Butea monosperma)ಇತರ ಇಂಗ್ಲಿಷ್ ಹೆಸರು “ಬುಟಿಯಾ ಗಮ್ ಟ್ರೀ” (Butea gum tree)ಈ ಹೂವುಗಳು ಪ್ರಕಾಶಮಾನವಾದ ಕಿತ್ತಳೆ ಮತ್ತು ಕೆಂಪು ಬಣ್ಣದಲ್ಲಿ ಅರಳಿ, ಕಾಡಿಗೆ ಬೆಂಕಿ ಬಿದ್ದಂತೆ ಕಾಣುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಇದನ್ನೂ ಓದಿ:ಜೂನ್‌ ೨೨ರಿಂದ ಮುಂಗಾರು ಮಳೆ ಚುರುಕಾಗಬಹುದೇ ?

ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಮುತ್ತುಗದ ಮರವು ಎಲೆಗಳನ್ನೆಲ್ಲ ಉದುರಿಸಿ, ಕೆಂಪು ವರ್ಣದ ಸುಂದರವಾದ ಹೂವುಗಳನ್ನು ಮುಡಿಯುತ್ತದೆ. ಇನ್ನೇನು ಮುಂಗಾರು ಆರಂಭವಾಗುತ್ತದೆ ಎನ್ನುವ ಕಾಲಕ್ಕೆ ಈ ಮರವು ಬಿಡುವ ಕೆಂಪು ಹೂವುಗಳು ಮತ್ತು ತದನಂತರ ಬಿಡುವ ಕಾಯಿಗಳು ಆ ವರ್ಷದ ಮಳೆಯ ಏರುಪೇರುಗಳನ್ನು ರೈತರಿಗೆ ತಿಳಿಸಿಕೊಡುತ್ತವೆ.

ಜನಪದರ ನಂಬಿಕೆಯ ಪ್ರಕಾರ, ಮುತ್ತುಗದ ಮರವು ಚೆನ್ನಾಗಿ ಹೂ ಬಿಟ್ಟು, ಕಾಯಿ ಕಟ್ಟಿ, ಆ ಕಾಯಿಗಳು ಮರದಲ್ಲಿ ಜೋಲಾಡುತ್ತಿದ್ದರೆ  ಆ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಳೂ ಅತ್ಯಂತ ಸಮೃದ್ಧವಾಗಿರುತ್ತವೆ ಎಂದರ್ಥ.

ಇದನ್ನೂ ಓದಿ:ಮುಂಗಾರು ಮಳೆ ಮುನ್ಸೂಚನೆ ನೀಡುವ ಟಿಟ್ಟಿಭ ಪಕ್ಷಿ

ಬೀಜದ ಸ್ಥಾನ ಮತ್ತು ಮಳೆಯ ಮುನ್ಸೂಚನೆ

ಮುತ್ತುಗದ ಕಾಯಿಯಲ್ಲಿರುವ ರೂಪಾಯಿಗಲದ (ನಾಣ್ಯದ ಆಕಾರದ) ಬೀಜವು ಕಾಯಿಯ ಯಾವ ಭಾಗದಲ್ಲಿದೆ ಎಂಬುದರ ಆಧಾರದ ಮೇಲೆ ರೈತರು ಮಳೆಯ ಹಂಚಿಕೆಯನ್ನು ಸೂಕ್ಷ್ಮವಾಗಿ ಲೆಕ್ಕಾಚಾರ ಮಾಡುತ್ತಾರೆ:

  1. ತೊಟ್ಟಿನ ಭಾಗದಲ್ಲಿದ್ದರೆ (ಹಿಂಗಾರು ಉತ್ತಮ): ಬೀಜವು ಕಾಯಿಯ ತೊಟ್ಟಿನ ಭಾಗಕ್ಕೆ ಹತ್ತಿರವಾಗಿದ್ದರೆ, ಆ ವರ್ಷ ಹಿಂಗಾರು ಮಳೆಯು ಅತ್ಯುತ್ತಮವಾಗಿರಲಿದೆ ಎಂದು ನಂಬಲಾಗುತ್ತದೆ.
  2. ತುದಿಯ ಭಾಗದಲ್ಲಿದ್ದರೆ (ಮುಂಗಾರು ಉತ್ತಮ): ಒಂದು ವೇಳೆ ಬೀಜವು ಕಾಯಿಯ ತುದಿಯ ಭಾಗದಲ್ಲಿದ್ದರೆ, ಆ ವರ್ಷ ಮುಂಗಾರು ಮಳೆಯು ಸಕಾಲಕ್ಕೆ ಮತ್ತು ಅತ್ಯಂತ ಸಮೃದ್ಧವಾಗಿ ಸುರಿಯುತ್ತದೆ ಎಂಬುದು ರೈತರ ಅಚಲ ನಂಬಿಕೆ.
  3. ಮಧ್ಯ ಭಾಗದಲ್ಲಿದ್ದರೆ (ಎರಡೂ ಮಳೆಗಳು ಉತ್ತಮ): ಬೀಜವು ಸರಿಯಾಗಿ ಕಾಯಿಯ ಮಧ್ಯ ಭಾಗದಲ್ಲಿದ್ದರೆ, ಆ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಳೂ ಸಮನಾಗಿ ಮತ್ತು ಉತ್ತಮವಾಗಿ ಬರುತ್ತವೆ ಎಂದು ಜನಪದರು ಲೆಕ್ಕಾಚಾರ ಹಾಕುತ್ತಾರೆ.

ವಿಜ್ಞಾನ ತಂತ್ರಜ್ಞಾನ ಬೆಳೆದಿದ್ದರೂ, ಪ್ರಕೃತಿಯ ಸೂಕ್ಷ್ಮ ಸಂಕೇತಗಳನ್ನು ಅರಿತು ಬದುಕುವ ಜನಪದರ ಈ ದೇಶಿ ಜ್ಞಾನವು ಇಂದಿಗೂ ವಿಸ್ಮಯಕಾರಿಯಾಗಿದೆ. ಮುತ್ತುಗದ ಮರದ ಪ್ರತಿಯೊಂದು ಪ್ರಕ್ರಿಯೆಯೂ ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇಂದಿನ ಪೀಳಿಗೆಯಲ್ಲಿ ಮರಳಿ ಮಣ್ಣಿಗೆ ಮುಖ ಮಾಡ ಬಯಸುವವರಿಗೆ ಇಂತಹ ಸಾಂಪ್ರದಾಯಿಕ ಹವಾಮಾನ ಜ್ಞಾನಗಳು ಪ್ರಕೃತಿಯನ್ನು ಮತ್ತಷ್ಟು ಗೌರವಿಸಲು ಪ್ರೇರಣೆ ನೀಡುತ್ತವೆ.

LEAVE A REPLY

Please enter your comment!
Please enter your name here