ಮಾದರಿ ಹೈನುಗಾರಿಕೆ: ಮೇವು ಉತ್ಪಾದನೆ ಅನಿವಾರ್ಯ

0
ಲೇಖಕರು: ಮಂಜುನಾಥ ಹೊಳಲು

ಸರಣಿ ೧

ಅವೈಜ್ಞಾನಿಕ ಹೈನುಗಾರಿಕೆ ಅನಾಹುತಗಳು!

ಅವೈಜ್ಞಾನಿಕ ಹೈನುಗಾರಿಕೆಯು ಹಸುಗಳಿಗೆ ನರಕ ದರ್ಶನ ಮಾಡಿಸುವ ವಿಧಾನವಾಗಿದೆ, ಕೊಟ್ಟಿಗೆಯಲ್ಲಿ ಗಾಳಿ ಬೆಳಕಿನ ಕೊರತೆ, ಸೊಳ್ಳೆ, ನೊಣಗಳ ಕಾಟ, ಸಗಣಿಯ ಮೇಲೆ ಮಲಗುವುದು. ಗೊಂತಿನಲ್ಲಿ ಸದಾಕಾಲ ಮೇವಿಲ್ಲದೆ, ಸ್ವತಂತ್ರವಾಗಿ ಓಡಾಡಲು ಅವಕಾಶವಿರುವುದಿಲ್ಲ. ಇಂತಹ ವಾತಾವರಣ ಹಸುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಈ ರೀತಿ ಒತ್ತಡದಲ್ಲಿರುವ ಹಸುವಿನ ಹಾಲಿನಲ್ಲಿ ಕಾರ್ಟಿಜೋಲ್ ಸ್ಟಿರಾಯ್ಡ್ ಅಂಶವಿದ್ದು ಹಾಲು ಕುಡಿದವರಿಗೂ ಸೇರುತ್ತದೆ. ಸಾಮಾನ್ಯವಾಗಿ ಅವೈಜ್ಞಾನಿಕ ವಿಧಾನದಲ್ಲಿ ಹಸು ಸಾಕುವ ರೈತನ ಕುಟುಂಬದವರಿಗೆಲ್ಲ ದಿನವಿಡೀ ಹೆಚ್ಚು ಕೆಲಸವಿರುತ್ತದೆ. ಈ ವಿಧಾನವು ಹಸುಗಳ ಅರೋಗ್ಯ, ಹಾಲಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಹೈನುಗಾರರಿಗೆ ಹಾಲಿನಿಂದ ಬರುವ ಆದಾಯಕ್ಕಿಂತ ಹಿಂಡಿ ಬೂಸಾ ಮತ್ತು ಔಷದೋಪಚಾರದ ಖರ್ಚು ಹೆಚ್ಚಾಗಿರುತ್ತದೆ. ಅಕ್ಷಯಕಲ್ಪ ಹೈನುಗಾರಿಕೆ ಮಾದರಿಯಲ್ಲಿ ಹೈನುಗಾರರು ನೆಮ್ಮದಿಯಿಂದಿರುತ್ತಾರೆ. ಹಸುಗಳಿಗೆ ಸ್ವಾತಂತ್ರವಿದ್ದು, ಆರೋಗ್ಯವಾಗಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಹೆಚ್ಚು ಲಾಭವಾಗುತ್ತದೆ, ಹಸುಗಳ ಮತ್ತು ಗ್ರಾಹಕರ ಆರೋಗ್ಯವು ಉತ್ತಮವಾಗಿರುತ್ತದೆ. ಬನ್ನಿ ಅಕ್ಷಯಕಲ್ಪ ಮಾದರಿಯನ್ನು ಅಳವಡಿಸಿಕೊಳ್ಳೋಣ.

ಅಕ್ಷಯಕಲ್ಪ ಹೈನುಗಾರಿಕೆಯ ಧೈಯ

ಅಕ್ಷಯಕಲ್ಪ ಧೈಯ, ರೈತರಿಗೆ ಹಲವಾರು ಅವಕಾಶಗಳನ್ನು ಕೃಷಿ ಭೂಮಿಯಲ್ಲಿ ಒದಗಿಸುವುದಾಗಿದೆ, ಜನರು ಕೃಷಿಯ ಕಡೆ ಹೆಚ್ಚು ಗಮನಹರಿಸಲು ಪ್ರತಿ ಹಳ್ಳಿಗಳಲ್ಲಿ ಕೃಷಿ ಮಾಡುವ ಮಾದರಿ ರೈತರನ್ನು ಸೃಷ್ಟಿಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ರೈತರಿಗೆ ಪ್ರತಿದಿನ ಆದಾಯ ಬರುವಂತಹ ಮೂಲ ಹೈನುಗಾರಿಕೆಯಾಗಿರುವುದರಿಂದ ಅಕ್ಷಯಕಲ್ಪವು ಈ ಮೂಲಕ ರೈತರನ್ನು ತಲುಪಿ ಹಳ್ಳಿಗಳಲ್ಲಿ ಗುಣಮಟ್ಟದ-ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿದೆ.

ಅಕ್ಷಯಕಲ್ಪ ಸಂಸ್ಥೆ 2010ರಲ್ಲಿ ಆರಂಭವಾದಾಗ ರೈತರ ಸರಾಸರಿ ಮಾಸಿಕ ಆದಾಯ 30-35 ಸಾವಿರ ರೂ. ಗಳಿತ್ತು ಆದರೆ ಹಾಲು ಉತ್ಪಾದನೆ ಮಾಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ನಂತರ 2020-21ರಲ್ಲಿ ಅದೇ ರೈತರ ಸರಾಸರಿ ಆದಾಯ ಒಂದು ಲಕ್ಷವಾಗಿದೆ. ಅಕ್ಷಯಕಲ್ಪ ಮಾದರಿಯಲ್ಲಿ ಹೈನುಗಾರಿಕೆ ಮಾಡಿದರೆ ರೈತರ ಆದಾಯ ಹತ್ತು ಪಟ್ಟು ಹೆಚ್ಚಾಗುತ್ತದೆ ಎಂದು ಎಲ್ಲರಿಗೂ ತಿಳಿಸಲು ಹೊರಟಿದೆ. ಅಕ್ಷಯಕಲ್ಪ ಹಾಲನ್ನು ಬಳಸುವ ಗ್ರಾಹಕರು ಉತ್ತಮ ಗುಣಮಟ್ಟದ ಹಾಲು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಈ ವ್ಯವಸ್ಥೆಯು ರೈತರನ್ನು ಅಭಿವೃದ್ಧಿಗೊಳಿಸಲು ಸಹಾಯಕವಾಗುತ್ತದೆ.

ಸುಸ್ಥಿರ ಹೈನುಗಾರಿಕೆಗೆ ಮೇವು ಉತ್ಪಾದನೆ ಅನಿವಾರ್ಯ?

ಸಾವಯವ ಹೈನುಗಾರಿಕೆಯಲ್ಲಿ ಸುಸ್ಥಿರ ಆದಾಯ ಗಳಿಸಲು ಮೇವು ಉತ್ಪಾದನೆ ಅತ್ಯಂತ ಪ್ರಮುಖವಾದುದು. ಹೈನುಗಾರಿಕೆಯಲ್ಲಿ ಸೋಲುಂಟಾಗಲು ಅನೇಕ ಕಾರಣಗಳಲ್ಲಿ ಮೇವಿನ ಕೊರತೆಯು ಪ್ರಮುಖವಾಗಿದೆ. ಈ ಕೊರತೆ ನೀಗಿಸಲು ರೈತರು ತಮ್ಮ ಭೂಮಿಯಲ್ಲಿ ಸಮೃದ್ಧ ಮೇವು ಬೆಳೆದುಕೊಂಡಾಗ ಮಾತ್ರ ಕಡಿಮೆ ವೆಚ್ಚದಲ್ಲಿ ಹಾಲು ಉತ್ಪಾದಿಸಲು, ಹಾಲಿನ ಗುಣಮಟ್ಟ ಹೆಚ್ಚಿಸಲು ಹಾಗೂ ವರ್ಷವಿಡಿ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಈಗಾಗಲೇ ಡೈರಿ ಫಾರ್ಮ್ ಹೊಂದಿರುವ ಮತ್ತು ಹೊಸದಾಗಿ ಆರಂಭಿಸುವ ರೈತರಿಗೆ ಮೇವಿನ ಬೆಳೆಗಳ ಬಿತ್ತನೆಗೆ ಮೇ ತಿಂಗಳು ಸೂಕ್ತ ಸಮಯವಾಗಿದೆ. ತಡಮಾಡದೆ ಮೇವು ಉತ್ಪಾದನೆ ಕೈಗೊಳ್ಳಿ. ಮೇವಿನ ಬೆಳೆಗಳನ್ನು ಮುಖ್ಯವಾಗಿ ಏಕದಳ ಬಹುವಾರ್ಷಿಕ ಬೆಳೆಗಳಲ್ಲಿ ಮೆಕ್ಕೆಜೋಳ, BNH-10, COFS-29/31 ಹಾಗೂ ಸೂಪರ್ ನೇಪಿಯರ್. ದ್ವಿದಳ ಬಹುವಾರ್ಷಿಕ ಬೆಳೆಗಳಲ್ಲಿ ಕುದುರೆ ಮೆಂತ್ಯೆ, ಮತ್ತು ಬೇಲಿ ಮೆಂತ್ಯೆ, ಹಾಗೂ ಕೃಷಿಭೂಮಿ ಬದುಗಳ ಮೇಲೆ ಮರಮೇವುಗಳಾದ ನುಗ್ಗೆ, ಬಸವನಪಾದ, ಅಗಸೆ, ಸುಬಾಬುಲ್ ಮತ್ತು ಹಾಲುವಾಣ ಉತ್ತಮ ಇಳುವರಿ ಕೊಡುವ ಪ್ರಮುಖ ಮೇವಿನ ತಳಿಗಳಾಗಿವೆ.

ಉತ್ತಮ ಗುಣಮಟ್ಟದ ಹಸಿರುಮೇವು ಉತ್ಪಾದನೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳು

ಹುಲ್ಲಿನ ಬೀಜಗಳು ಗಾತ್ರದಲ್ಲಿ ತುಂಬಾ ಸಣ್ಣವಾಗಿರುವುದರಿಂದ ಬಿತ್ತನೆಯ ಆಳ ಒಂದರಿಂದ 2 ಸೆಂಟಿಮೀಟರ್ ಮಾತ್ರ ಇರಬೇಕು. 1 ಕೆಜಿ ಬೀಜಕ್ಕೆ 3 ಕೆಜಿ ಮರಳು ಅಥವಾ ಮಣ್ಣು ಬೆರಕೆ ಮಾಡಿ ಬಿತ್ತುವುದು ಸೂಕ್ತ. ಬಿತ್ತನೆಯನ್ನು ಚಳಿಗಾಲ ಒರತುಪಡಿಸಿ ಇತರ ಕಾಲದಲ್ಲಿ ಬಿತ್ತನೆ ಮಾಡಬಹುದು. ಬೇರು ಅಥವಾ ಕಡ್ಡಿ ಬಿತ್ತನೆಯನ್ನು ಮಳೆಗಾಲದಲ್ಲಿ ಮಾಡುವುದು ಸೂಕ್ತ.

50 ಪ್ರತಿಶತಃ ಹೂವಾಡುವ ಹಂತವು ಗುಣಮಟ್ಟದ ಮೇವು ಕಟಾವಿಗೆ ಸೂಕ್ತ ಸಮಯ. ಜಮೀನಿನ ಸುತ್ತ್ತಅಥವಾ ಬದುಗಳ ಮೇಲೆ ಮರಮೇವು ಬೆಳೆಯುವುದರಿಂದ ಬೇಸಿಗೆ ಕಾಲದ ಮೇವು ಬೇಡಿಕೆಯನ್ನು ಸರಿಧೂಗಿಸಬಹುದು. ಮಳೆಗಾಲದಲ್ಲಿ ಹೆಚ್ಚಿಗೆ ಬೆಳೆದ ಮೇವನ್ನು ಒಣಮೇವಾಗಿ ಶೇಖರಿಸಿ ಬಳಸಬಹುದು. ಏಕದಳ ಮತ್ತು ದ್ವಿದಳ ಮೇವನ್ನು 75:25 ಅನುಪಾತದಲ್ಲಿ ಕೊಡುವುದು ಉತ್ತಮ.

ಮುಂದುವರಿಯುತ್ತದೆ

LEAVE A REPLY

Please enter your comment!
Please enter your name here