ತೋತಾಪುರಿ ಬೆಳೆಗಾರರ ಬವಣೆ ಪರಿಹಾರ ಹೇಗೆ ?

0
ಲೇಖಕರು: ಸುರೇಶ್‌ ಕಂಜರ್ಪಣೆ
ಕೋಲಾರದ ರೈತರು ತೋತಾಪುರಿ ಮಾವಿನ ಹಣ್ಣನ್ನು ಬೆಲೆ ಕುಸಿತದ ಕಾರಣಕ್ಕೆ, ಪ್ರತಿಭಟಿಸಿ ರಸ್ತೆಗೆ ಚೆಲ್ಲಿದ್ದಾರೆ. ಚಿತ್ತೂರು ಜಿಲ್ಲಾಧಿಕಾರಿಯು ಕರ್ನಾಟಕದ ತೋತಾಪುರಿ ಅಲ್ಲಿಗೆ ಬಾರದಂತೆ ನಿರ್ಬಂಧಿಸಿದ ಕಾರಣ ಈ‌ ಕುಸಿತ ಆಗಿದೆ. ಈ ನಿರ್ಬಂಧ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ನಮ್ಮ ಮುಖ್ಯಮಂತ್ರಿ ತಗಾದೆ ತೆಗೆದು ಪತ್ರ ಬರೆದಿದ್ದಾರೆ.
ಸರಕಾರದ ಜಾಣತನ, ನಿರ್ಲಕ್ಷ್ಯ ಇಲ್ಲೇ ಇರುವುದು ಯಾರಿಗೂ ಕಂಡಿಲ್ಲ.
೧. ಚಿತ್ತೂರು, ತೋತಾಪುರಿಯ ಮಾರಾಟದ ಕೇಂದ್ರ. ಈ ತೋತಾಪುರಿ ಹಣ್ಣನ್ನು ಮನುಷ್ಯರು ತಿಂದಿದ್ದು ನಾನು ನೋಡಿಲ್ಲ ! ಮಾವಿನ ಹಣ್ಣಿನ‌ ಪಲ್ಪಿನ‌ ಬಳಕೆ ಮಾಡುವ ಕಂಪೆನಿಗಳಷ್ಟೇ ಇದರ ಗ್ರಾಹಕರು. ದೊಡ್ಡ ಕಂಪನಿಗಳು ಇದರ  ಗ್ರಾಹಕರು. ಈ ಬೆಲೆ ಕುಸಿತ ಪ್ರತಿ ವರ್ಷ ಆಗುತ್ತಿದೆ. ಕೆಜಿಗೆ ೨ ರಿಂದ ೮ ರೂ.ಗೆ ಈ ಕಂಪೆನಿಗಳು ಖರೀದಿಸುತ್ತವೆ.
೨.ಈ ಬಾರಿ ಆಂಧ್ರದ ಸರಕಾರ ತೋತಾಪುರಿಗೆ ₹ ೮ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಕಂಪೆನಿಗಳನ್ನು ಸಂತೃಪ್ತಗೊಳಿಸಿ, ಇತ್ತ ರೈತರನ್ನು ಸಮಾಧಾನಪಡಿಸಲು ಕೆಜಿಗೆ ₹೪/- ಪ್ರೋತ್ಸಾಹ ಧನ ತನ್ನ ಕೈಯಿಂದ ನೀಡುತ್ತಿದೆ. ಇರಲಿ.
೩. ಈ ಪ್ರೋತ್ಸಾಹ ಧನ ಮತ್ತು MSP ಅನ್ಯರ ಪಾಲಾಗಬಾರದು ಮತ್ತು ಹೊರಗಿನ‌ ಮಾವು ಆಮದಾಗಿ ಇನ್ನಷ್ಟು ಬೆಲೆ ಕುಸಿತ ಆಗಬಾರದು ಎಂದು ಆಂಧ್ರ ಸರಕಾರ ಕರ್ನಾಟಕದಿಂದ ಆಮದಾಗುವುದನ್ನು ನಿರ್ಬಂಧಿಸಿದೆ.
ಈಗ ಪ್ರಶ್ನೆ, ನಮ್ಮ ಸರಕಾರ ಯಾಕೆ ಈ ರೈತರ ಮಾವು ಮಾರಾಟಕ್ಕೆ ತನ್ನದೇ ಕೇಂದ್ರ ತೆರೆಯುತ್ತಿಲ್ಲ? MSP+ ಪ್ರೋತ್ಸಾಹಧನ ಘೋಷಿಸುತ್ತಿಲ್ಲ? ಬೆಂಬಲ ಬೆಲೆ ಘೋಷಣೆಗೆ ಈಗ ಕೇಂದ್ರಕ್ಕೇಕೆ ಪತ್ರಬರೆಯುತ್ತದೆ? ಆಂಧ್ರಪ್ರದೇಶ ಸರಕಾರ ಈ MSP + ಪ್ರೋತ್ಸಾಹ ಧನ ಯೋಜನೆ ಆರಂಭಿಸಿತು? ಈ ಪ್ರಶ್ನೆಗಳನ್ನು ನಾವು ಕೇಳಬೇಕಿದೆ.
ತೋತಾಪುರಿ ಈಗ ಜೂನಲ್ಲಿ ಧುತ್ತನೆ ಕಟಾವಿಗೆ ಬಂತೇ? ಎಷ್ಟು ಎಕರೆಯಲ್ಲಿ ಈ ಬೆಳೆ ಇದೆ, ಅಂದಾಜು ಎಷ್ಟು ಪ್ರೊಡಕ್ಷನ್ ಆಗಬಹುದು ಎಂಬ ಮಾಹಿತಿ ಸರಕಾರದ ಬಳಿ‌ ಇಲ್ಲವೇ? ಕರ್ನಾಟಕ ಸರಕಾರಕ್ಕೆ ಈ ಸಂಕಷ್ಟದ ಅರಿವಿದೆ.ಆದರೆ ಉದಾಸೀನ‌ ನೀತಿಯ ಮೂಲಕ ರೈತರನ್ನು ಬೀದಿಗೆ ತಳ್ಳಿದೆ. ಈಗ ಆಂಧ್ರಪ್ರದೇಶ, ಕೇಂದ್ರದ ಮೇಲೆ ಗೂಬೆ ಕೂರಿಸಲು ನೋಡುತ್ತಿದೆ.
KMF ನಂಥಾ ಒಂದು ಸಂಸ್ಥೆ ಹತ್ತಿಪ್ಪತ್ತು ಕೋಟಿ ಬಂಡವಾಳದ ಮೂಲಕ‌ ಮಾವಿನಹಣ್ಣಿನ‌ ಪಲ್ಪ್ ತಯಾರಿಸಬಹುದು. ರೈತರಿಂದ ಸರಕಾರ ಕೊಂಡು KMF ನಂಥಾ ಸಂಸ್ಥೆಗೆ ಮಾರಬಹುದು. ಆದರೆ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಈ ವ್ಯವಹಾರದ ನಿಯಂತ್ರಣ ಹೊಂದಿರುವಾಗ ಸರಕಾರ ತಿರುಗಿಯೂ ನೋಡದು. ಇದು ಸ್ಪಷ್ಠ. ಖಾಸಗೀ ಬಂಡವಾಳ ಹೂಡಿಕೆಯನ್ನು ತನ್ನ ಪವಿತ್ರ ಧ್ಯೇಯವೆಂದು ಭಾವಿಸಿರುವ ಸರಕಾರ, ಆ ಕಂಪೆನಿ ರೈತರನ್ನು ಶೋಷಿಸುವಾಗ ರಕ್ಷಣೆಗೆ ಬಂದಿದ್ದುಂಟೇ?

LEAVE A REPLY

Please enter your comment!
Please enter your name here